ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಂಬೇಡ್ಕರ್ ತತ್ವ ಪ್ರಚಾರಕ್ಕೆ ಹಿನ್ನಡೆ’

Last Updated 21 ಏಪ್ರಿಲ್ 2021, 4:55 IST
ಅಕ್ಷರ ಗಾತ್ರ

ತುಮಕೂರು: ಸಂವಿಧಾನದ ಲಾಭ ಪಡೆದು ಸರ್ಕಾರಿ ನೌಕರಿಗೆ ಸೇರಿ ಹಣ ಸಂಪಾದಿಸುತ್ತಿರುವ ಶೋಷಿತ ಸಮುದಾಯಗಳ ಜನರು ತಮ್ಮ ಮುಂದಿನ ಪೀಳಿಗೆಗೆ ಅಂಬೇಡ್ಕರ್ ತತ್ವ, ಸಿದ್ಧಾಂತಗಳನ್ನು ಹಸ್ತಾಂತರಿಸುತ್ತಿಲ್ಲ ಎಂದು ಕಾಂಗ್ರೆಸ್ ಅಲ್ಪ ಸಂಖ್ಯಾತರ ಜಿಲ್ಲಾ ಘಟಕದ ಅಧ್ಯಕ್ಷ ಅತೀಕ್ ಅಹಮದ್ ವಿಷಾದಿಸಿದರು.

ನಗರದ ಜಯಪುರ ಬಡಾವಣೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಜನಜಾಗೃತಿ ಸಮಿತಿಯಿಂದ ಆಯೋಜಿಸಿದ್ದ ‘ಮಹಾನಾಯಕ’ ಫ್ಲೆಕ್ಸ್ ಅನಾವರಣ, ಬಿ.ಆರ್.ಅಂಬೇಡ್ಕರ್ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಂವಿಧಾನದ ಲಾಭ ಪಡೆದವರೇ
ತಮ್ಮ ಪುರೋಭಿವೃದ್ಧಿಗೆ ಕಾರಣರಾದವರನ್ನು ಮರೆಯುತ್ತಿದ್ದಾರೆ ಎಂದರು.

ಸಂವಿಧಾನದಿಂದ ಎಲ್ಲಾ ವರ್ಗದ ಜನರು ಅನುಕೂಲ ಪಡೆದುಕೊಳ್ಳುತ್ತಿದ್ದರೂ, ಅಂಬೇಡ್ಕರ್‌ ಅವರನ್ನು ಒಂದು ವರ್ಗಕ್ಕೆ ಸೀಮಿತಗೊಳಿಸಲಾಗುತ್ತಿದೆ. ಪ್ರಪಂಚದ ವಿವಿಧೆಡೆ ಅವರು ಜ್ಞಾನದ ಸಂಕೇತವಾಗಿ ಆರಾಧಿಸಲ್ಪಡುತ್ತಿದ್ದರೆ, ಭಾರತದಲ್ಲಿ ಮಾತ್ರ, ದೀನ, ದಲಿತರ, ಶೋಷಿತರ ಪ್ರತಿನಿಧಿಯಾಗಿ ಸೀಮಿತಗೊಳಿಸಲಾಗಿದೆ ಎಂದು ತಿಳಿಸಿದರು.

ಕಾಂಗ್ರೆಸ್ ಎಸ್.ಸಿ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಜಿ.ಲಿಂಗರಾಜು, ‘ಪ್ರಸ್ತುತ ಜಗತ್ತಿನಲ್ಲಿ ಅಂಬೇಡ್ಕರ್ ಪ್ರತಿಪಾದಿಸಿದ ಅರ್ಥಿಕ, ಸಾಮಾಜಿಕ, ಶೈಕ್ಷಣಿಕ, ಔದ್ಯೋಗಿಕ ವಿಷಯಗಳು ಪ್ರಮುಖವಾಗಿ ಚರ್ಚೆಯಾಗುತ್ತಿವೆ. ಸಂವಿಧಾನದ ಅನ್ವಯ ರಚಿತವಾದ ರಿಸರ್ವ್ ಬ್ಯಾಂಕ್‍ನ ಕಟ್ಟುನಿಟ್ಟಾದ ಆರ್ಥಿಕ ನೀತಿಗಳ ಫಲವಾಗಿ ಪ್ರಪಂಚವೇ ಆರ್ಥಿಕ ಸಂಕಷ್ಟಕ್ಕೆ ಒಳಗಾದರೂ ದೇಶದ ಆರ್ಥಿಕ ಸ್ಥಿತಿಗತಿಯ ಮೇಲೆ ಹೆಚ್ಚಿನ ಪರಿಣಾಮ ಬೀರಿರಲಿಲ್ಲ. ಇದು ಅವರ ಮೇಧಾವಿತನಕ್ಕೆ ಸಾಕ್ಷಿಯಾಗಿದೆ. ಸಂವಿಧಾನಕ್ಕೆ ಧಕ್ಕೆ ಉಂಟಾಗುವ ಸಂದರ್ಭ ಎದುರಾದರೆ, ಅಂತಹ ಪ್ರಯತ್ನಗಳನ್ನು ಒಗ್ಗೂಡಿ ಹಿಮ್ಮೆಟ್ಟಿಸಬೇಕಾಗಿದೆ’ ಎಂದು ಸಲಹೆ ಮಾಡಿದರು.

ಸಮಿತಿ ಮುಖಂಡ ಪಿ.ಶಿವಾಜಿ, ‘ಮೀಸಲಾತಿ ಉಳಿಯಬೇಕಾದರೆ ಸಂವಿಧಾನ ಜಾರಿಯಾಗಬೇಕು. ಆದರೆ ಮೀಸಲಾತಿ ಇನ್ನೆಷ್ಟು ದಿನ ಮುಂದುವರೆಯಬೇಕು ಎಂದು ಪ್ರಶ್ನಿಸುವಂತಹ ಸ್ಥಿತಿ ನಿರ್ಮಾಣವಾಗಿದೆ. ಸಂವಿಧಾನ ಜಾರಿಯಾಗಿ 75 ವರ್ಷ ಕಳೆದರೂ ಅದರ ಎಲ್ಲಾ ಆಶಯಗಳು ಇಂದಿಗೂ ಈಡೇರಿಲ್ಲ. ಈ ಬಗ್ಗೆ ಯುವಜನರಿಗೆ, ಶೋಷಿತ ಸಮುದಾಯದವರಿಗೆ ಜಾಗೃತಿ ಮೂಡಿಸಬೇಕು’ ಎಂದು ಹೇಳಿದರು.

ಹೋರಾಟಗಾರರಾದ ಹೆಗ್ಗೆರೆ ಕೃಷ್ಣಪ್ಪ, ಕೆ.ಗೋವಿಂದರಾಜು, ಎನ್.ಕೆ.ನಿಧಿಕುಮಾರ್, ಕೆಸರುಮಡು ಗೋಪಾಲ್, ಎ.ಎಸ್.ರಾಜು, ಸಿದ್ದಲಿಂಗಯ್ಯ, ಮಧುಗಿರಿ ರಂಗಸ್ವಾಮಿ, ಶಿರಾಗೇಟ್ ರವಿಕುಮಾರ್, ಜೆಸಿಬಿ ವೆಂಕಟೇಶ್ ಅವರನ್ನು ಅಭಿನಂದಿಸಲಾಯಿತು. ಜಯಪುರ ಬಡಾವಣೆ ಮುಖಂಡರಾದ ಟಿ.ಆರ್.ಗುರುಪ್ರಸಾದ್, ಚಂದ್ರಶೇಖರ್, ರುದ್ರೇಶ್, ಟಿ.ಆರ್.ನಾಗೇಶ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT