ತುಮಕೂರು: ನಗರದ ರಾಧಾಕೃಷ್ಣ ರಸ್ತೆಯ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಕಚೇರಿ ಸಮೀಪ ಸ್ಮಾರ್ಟ್ಸಿಟಿ ಕಾಮಗಾರಿಗಾಗಿ ತಂದಿದ್ದ ಪೈಪ್ಗಳು ಮಂಗಳವಾರ ರಾತ್ರಿ 3.30ರ ಸುಮಾರಿಗೆ ಆಕಸ್ಮಿಕ ಬೆಂಕಿಯಿಂದ ಸುಟ್ಟು ಹೋಗಿವೆ.
ಆಂಧ್ರದ ಸಿದ್ಧಾರ್ಥ ಸಿ.ಎಲ್. ವರ್ಕ್ಸ್ ಕಂಪನಿಯವರು ಕಾಮಗಾರಿಗಾಗಿ ಪೈಪ್ಗಳನ್ನು ದಾಸ್ತಾನು ಮಾಡಿದ್ದರು. ಸುಮಾರು ನಾಲ್ಕು ಲಾರಿ ಲೋಡ್ ಪಿವಿಸಿ ಪೈಪ್ಗಳು ಬೆಂಕಿಗೆ ಆಹುತಿಯಾಗಿದ್ದು, ಈ ಅನಾಹುತದಿಂದ ಸುಮಾರು ₹ 25 ಲಕ್ಷಕ್ಕೂ ಹೆಚ್ಚು ಹಾನಿಯಾಗಿದೆ ಎಂದು ಹೇಳಲಾಗುತ್ತಿದೆ.
ಪಿವಿಸಿ ಪೈಪ್ಗಳು ಹೊತ್ತಿಕೊಂಡು ಉರಿಯುವುದನ್ನು ಕಂಡ ಸ್ಥಳೀಯರು ತಕ್ಷಣ ಅಗ್ನಿಶಾಮಕ ದಳಕ್ಕೆ ಕರೆ ಮಾಡಿ ತಿಳಿಸಿದ್ದಾರೆ. ಸ್ವಲ್ಪ ಸಮಯದ ಬಳಿಕ ಅಗ್ನಿಶಾಮಕ ವಾಹನ ಸ್ಥಳಕ್ಕೆ ಬಂದರೂ ಬೆಂಕಿ ನಂದಿಸಲು ಸಾಧ್ಯವಾಗಲಿಲ್ಲ. ಸುಮಾರು 1 ಗಂಟೆಗೂ ಹೆಚ್ಚು ಕಾಲ ಬೆಂಕಿ ನಂದಿಸಲು ಸಿಬ್ಬಂದಿ ಶ್ರಮಿಸಿದರು.
ಪೈಪ್ಗಳು ಬೆಂಕಿಯಲ್ಲಿ ಹೊತ್ತಿ ಉರಿಯುವ ದೃಶ್ಯಗಳನ್ನು ಕೆಲವರು ಮೊಬೈಲ್ನಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.