ಕುಣಿಗಲ್: ತಾಲ್ಲೂಕು ಒಕ್ಕಲಿಗರ ಸಂಘದ ಆಶ್ರಯದಲ್ಲಿ ನಡೆಯುತ್ತಿರುವ ಪಟ್ಟಣದ ಜ್ಞಾನ ಭಾರತಿ ಶಾಲೆಯ ವಿದ್ಯಾರ್ಥಿ ಜಿ.ಎಂ.ಮಹೇಶ್ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 625ಕ್ಕೆ 624 ಅಂಕ ಗಳಿಸಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಹಂಚಿಕೊಂಡಿದ್ದಾರೆ.
ತಾಲ್ಲೂಕಿನ ಕೊತ್ತಗೆರೆ ಹೋಬಳಿಯ ಗುನ್ನಾಗರೆ ಗ್ರಾಮದ ಕೃಷಿಕ ಮಾಯಣ್ಣ ಮತ್ತು ಶಶಿಕಲಾ ದಂಪತಿ ಪುತ್ರ ಮಹೇಶ್ ಎಲ್ಕೆಜಿಯಿಂದಲೂ ಜ್ಞಾನಭಾರತಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಕನ್ನಡ 125, ಇಂಗ್ಲೀಷ್ 99, ಹಿಂದಿ 100, ಗಣಿತ 100, ವಿಜ್ಞಾನ 100, ಸಮಾಜವಿಜ್ಞಾನ 100 ಅಂಕಗಳನ್ನು ಪಡೆದಿದ್ದಾರೆ.
‘ಕುಟುಂಬ ಮತ್ತು ಶಾಲೆಯ ಸಂತೋಷವೇ ಮುಖ್ಯವಾಗಿದೆ. ಯಾರಿಂದಲೂ ಒತ್ತಡ ಇರಲಿಲ್ಲ. ನಿರಂತರವಾಗಿ ನಿತ್ಯ 6 ಗಂಟೆ ಶ್ರದ್ಧೆಯಿಂದ ಓದಿದ್ದು ಫಲ ನೀಡಿದೆ’ ಎಂದು ಮಹೇಶ್ ಸಂತಸ ಹಂಚಿಕೊಂಡರು.
‘ಮಗನ ಶ್ರಮ ಸಾರ್ಥಕವಾಗಿದೆ. ಮುಂದೆ ಅವನಿಚ್ಚೆಯ ವಿಷಯಗಳನ್ನು ಆಯ್ಕೆ ಮಾಡಿಕೊಂಡು ಓದಲಿ. ಸಾಧನೆ ಮುಂದುವರೆಯಲಿ. ನಮ್ಮ ಸಹಕಾರ, ಶಿಕ್ಷಕರ ಮಾರ್ಗದರ್ಶನ ನಿರಂತರವಾಗಿರುತ್ತದೆ’ ಎಂದು ಪೋಷಕರು ಸಂತಸ ವ್ಯಕ್ತಪಡಿಸಿದರು.
ಶಾಲೆಯ 20 ವರ್ಷಗಳ ಇತಿಹಾಸದಲ್ಲಿ ಮತ್ತು ತಾಲ್ಲೂಕಿನಲ್ಲಿ ಇದುವರೆಗೂ ಯಾರು ಮಾಡದ ಸಾಧನೆಯನ್ನು ಮಹೇಶ್ ಮಾಡಿದ್ದಾನೆ ಎಂದು ಪ್ರಾಂಶುಪಾಲ ಗೋವಿಂದೇಗೌಡ ಹರ್ಷ ವ್ಯಕ್ತಪಡಿಸಿದರು. ಉಪಪ್ರಾಂಶುಪಾಲ ರಮೇಶ, ಮುಖ್ಯಶಿಕ್ಷಕ ಕೆ.ಜಿ.ಪ್ರಕಾಶ್ ಮೂರ್ತಿ, ಗಂಗಮ್ಮ ಇದ್ದರು.