ತುಮಕೂರು: ಒಬ್ಬ ವ್ಯಕ್ತಿಯಿಂದ ವಿಶ್ವವಿದ್ಯಾನಿಲಯ ಪ್ರಗತಿ ಹೊಂದಲು ಸಾಧ್ಯವಿಲ್ಲ. ಅದೊಂದು ತಂಡದ ಪ್ರಯತ್ನವಾಗಬೇಕು ಎಂದು ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ವೈ.ಎಸ್.ಸಿದ್ದೇಗೌಡ ತಿಳಿಸಿದರು.
ವಿಶ್ವವಿದ್ಯಾನಿಲಯದ ಆಂತರಿಕ ಗುಣಮಟ್ಟ ಭರವಸೆ ಕೋಶವು (ಐಕ್ಯುಎಸಿ) ಪರೀಕ್ಷಾ ಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ‘ನ್ಯಾಕ್ ಮಾನ್ಯತೆಯ ಹೊಸ ವಿಧಾನ ಹಾಗೂ ಸ್ವ-ಅಧ್ಯಯನ ವರದಿ ತಯಾರಿ’ಯ ಕುರಿತ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ತಂಡ ಸ್ಫೂರ್ತಿಯಿಂದ ದುಡಿದರಷ್ಟೇ ಉತ್ತಮ ನ್ಯಾಕ್ ಮೌಲ್ಯಾಂಕನವನ್ನು ವಿವಿ ಪಡೆಯಲು ಸಾಧ್ಯ. ಈ ನಿಟ್ಟಿನಲ್ಲಿ ವಿವಿಯ ಸಮಗ್ರ ಅಭಿವೃದ್ಧಿಗೆ ಅಧ್ಯಾಪಕರು, ವಿದ್ಯಾರ್ಥಿಗಳು ಹಾಗೂ ಬೋಧಕೇತರ ಸಿಬ್ಬಂದಿಗಳ ತಂಡ ಪ್ರಯತ್ನ ಅತ್ಯಗತ್ಯ ಎಂದು ಹೇಳಿದರು.
ನ್ಯಾಕ್ ಮಾನ್ಯತೆಯ ಎರಡನೇ ಹಂತಕ್ಕೆ ವಿಶ್ವವಿದ್ಯಾನಿಲಯ ಸಿದ್ಧವಾಗುತ್ತಿದೆ. ಇದರ ವೇಗ ಇಮ್ಮಡಿಯಾಗಬೇಕಾಗಿದೆ. ಇದಕ್ಕೆ ಎಲ್ಲರ ಸಹಕಾರ ಹಾಗೂ ಸೃಜನಶೀಲತೆ ಅಗತ್ಯ ಎಂದರು.
ತುಮಕೂರು ವಿಶ್ವವಿದ್ಯಾನಿಲಯದ ಐಕ್ಯುಎಸಿ ಸಂಯೋಜನಾಧಿಕಾರಿ ಪ್ರೊ.ಕೆ.ಜಿ.ಪರಶುರಾಮ ಮಾತನಾಡಿ, ನ್ಯಾಕ್ ಮಾನ್ಯತೆ ಪ್ರಕ್ರಿಯೆಯ ಹೊಸ ಮಾನದಂಡಗಳು ಹಾಗೂ ಅವುಗಳಿಗೆ ವಿವಿ ಸಿದ್ಧವಾಗಬೇಕಿರುವ ಅಗತ್ಯತೆಯನ್ನು ವಿವರಿಸಿದರು.
ಸಂಪನ್ಮೂಲ ವ್ಯಕ್ತಿಗಳಾದ ಡಾ.ಆರ್.ಜಿ.ಶರತ್ಚಂದ್ರ, ಡಾ.ಕೆ.ಸಿ.ಸುರೇಶ್ ಇದ್ದರು.