ಗುಬ್ಬಿ: ತಾಲ್ಲೂಕಿನ ನಿಟ್ಟೂರುಪುರದ ಕಲ್ಲೇಶ್ವರಸ್ವಾಮಿ ದೇವಾಲಯದ ಮುಂದೆ ತೇರು ಮನೆಯಲ್ಲಿ ನಿಲ್ಲಿಸಿದ್ದ ದೇವರ ರಥಕ್ಕೆ ಕಿಡಿಗೇಡಿಯೊಬ್ಬ ಸೋಮವಾರ ಮಧ್ಯಾಹ್ನ ಬೆಂಕಿ ಹಚ್ಚಿದ್ದರಿಂದ ರಥ ಸಂಪೂರ್ಣವಾಗಿ ಸುಟ್ಟು ಹೋಗಿದೆ.
ಬೆಂಕಿ ಇಟ್ಟು ಓಡಿ ಹೋಗುತ್ತಿದ್ದ ಆರೋಪಿಯನ್ನು ಗ್ರಾಮದ ಯುವಕರು ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಇದೇ ತಿಂಗಳ 20 ರಿಂದ ಕಲ್ಲೇಶ್ವರಸ್ವಾಮಿ ಜಾತ್ರೆ ಆರಂಭವಾಗಲಿದ್ದು, ಅದಕ್ಕಾಗಿ ರಥವನ್ನು ಸಿದ್ಧಗೊಳಿಸಿದ್ದರು. ತೇರು ಮನೆ ಸ್ವಚ್ಛಗೊಳಿಸಲು ಬೀಗ ತೆಗೆದು ಹಾಗೆ ಬಿಟ್ಟಿದ್ದರು.
ಆರೋಪಿ ಹೊರ ರಾಜ್ಯದವನಾಗಿದ್ದು, ಕನ್ನಡ ಬರುತ್ತಿಲ್ಲ. ಕಳೆದ ಹಲವು ದಿನಗಳಿಂದ ಗ್ರಾಮದಲ್ಲಿ ಓಡಾಡುತ್ತಿದ್ದ ಎಂದು ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ‘ಆರೋಪಿ ಮಾನಸಿಕ ಸ್ಥಿಮಿತ ಕಳೆದುಕೊಂಡಂತೆ ಕಾಣುತ್ತಿದ್ದಾನೆ. ವೈದ್ಯಕೀಯ ತಪಾಸಣೆಯ ನಂತರ ಮುಂದಿನ ಕ್ರಮ ಕೈಗೊಳ್ಳುತ್ತೇವೆ’ ಎಂದು ಪೊಲೀಸರು ತಿಳಿಸಿದರು.