ಕೊರಟಗೆರೆ: ಪೊಲೀಸರೆಂದು ನಂಬಿಸಿ ಮಹಿಳೆಯ ₹ 1.60 ಲಕ್ಷ ಮೊತ್ತದ ಮಾಂಗಲ್ಯ ಸರ ಮತ್ತು ಕೈ ಬಳೆಗಳನ್ನು ಕಳ್ಳರು ಗುರುವಾರ ಹಾಡಹಗಲೇ ಹೊಳವನಹಳ್ಳಿ ಕ್ರಾಸ್ ಬಳಿ ದೋಚಿದ್ದಾರೆ.
ಆಭರಣ ಕಳೆದುಕೊಂಡ ಮಹಿಳೆ ಪಟ್ಟಣದ ತಾಲ್ಲೂಕು ಕಚೇರಿ ಹತ್ತಿರದ ನಿವಾಸಿ ಕೆ.ಸೀತಾಲಕ್ಷ್ಮಿ.
ಹೊಳವನಹಳ್ಳಿ ಕ್ರಾಸ್ ಬಳಿ ನಡೆದುಕೊಂಡು ಹೋಗುತ್ತಿದ್ದ ಇವರ ಬಳಿ ಬಂದ ಅಪರಿಚಿತರಿಬ್ಬರು ತಾವು ಪೊಲೀಸರು ಎಂದು ನಂಬಿಸಿದ್ದಾರೆ. ಮೈಮೇಲೆ ಒಡವೆಗಳನ್ನು ಹಾಕಿಕೊಳ್ಳಬೇಡಿ ಮೊದಲು ಬಿಚ್ಚಿ ಸೆರಗಿನಲ್ಲಿ ಕಟ್ಟಕೊಂಡು ಮನೆಗೆ ಹೋಗಿ ಇಲ್ಲವಾದರೆ ಕಳ್ಳತನವಾದೀತು ಎಂದು ಭಯ ಹುಟ್ಟಿಸಿದ್ದಾರೆ.
ಮೈಮೇಲಿನ ಒಡವೆ ಬಿಚ್ಚಿ ಕೊಡಿ ಪರ್ಸ್ಗೆ ಹಾಕಿಕೊಡುತ್ತೇವೆ ಕೊಡಿ ಎಂದು ಹೇಳಿ ಆಭರಣ ಪಡೆದು ಪರ್ಸಿಗೆ ಹಾಕುವ ರೀತಿಯಲ್ಲಿ ಹಾಕಿ ಬೇರೊಂದು ಪರ್ಸನ್ನು ಕೈಗೆ ಕೊಟ್ಟಿದ್ದಾರೆ. ಮನೆಗೆ ಹೋದ ಬಳಿಕವೇ ಪರ್ಸ್ ತೆಗೆದು ನೋಡಿ ಎಂದು ಹೇಳಿ ಪರಾರಿಯಾಗಿದ್ದಾರೆ. ಮನೆಗೆ ಮಹಿಳೆ ಬಂದು ಪರ್ಸ್ ತೆಗೆದು ನೋಡಿದಾಗ ಅದರಲ್ಲಿ ಆಭರಣಗಳ ಬದಲು ಕಲ್ಲು ಇದ್ದದ್ದು ಕಂಡು ಗಾಬರಿಗೊಂಡಿದ್ದಾರೆ. ಬಳಿಕ ಠಾಣೆಗೆ ದೂರು ಸಲ್ಲಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಸಾರ್ವಜನಿಕರು ಎಚ್ಚರಿಕೆವಹಿಸಲಿ: ಕಳ್ಳರು, ವಂಚಕರ ಬಗ್ಗೆ ಸಾರ್ವಜನಿಕರಿಗೆ ಪದೇ ಪದೇ ಎಚ್ಚರಿಕೆ ನೀಡುತ್ತಿದ್ದರೂ ಸಹ ಪದೇ ಪದೇ ಇಂತಹ ಘಟನೆಗಳು ನಡೆಯುತ್ತಿವೆ. ಮನೆಯಿಂದ ಹೊರ ಬಂದಾಗ ಸಾರ್ವಜನಿಕರು ಆಭರಣಗಳ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ಸಿಪಿಐ ಎಫ್.ಕೆ. ನದಾಫ್ ಮನವಿ ಮಾಡಿದ್ದಾರೆ.