ತುಮಕೂರು: ಸ್ವಾಮಿ ವಿವೇಕಾನಂದರ 150ನೇ ಜಯಂತಿ ಅಂಗವಾಗಿ ವಿವೇಕಾನಂದ ಕ್ರೀಡಾಕ್ಲಬ್ ‘ಏಕತೆಗಾಗಿ ಓಟ’ ಎಂಬ ಹೆಸರಿನಲ್ಲಿ ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ‘ತುಮಕೂರು ಮ್ಯಾರಥಾನ್-2019’ ಓಟದ ಸ್ಪರ್ಧೆಗೆ ಶಾಸಕ ಜಿ.ಬಿ.ಜ್ಯೋತಿಗಣೇಶ್ ಮತ್ತು ಪೊಲೀಸ್ ವರಿಷ್ಠಾಧಿಕಾರಿ ಕೆ.ವಂಶಿಕೃಷ್ಣ ಚಾಲನೆ ನೀಡಿದರು.
ರಾಜ್ಯದ ವಿವಿಧ ಭಾಗಗಳಿಂದ ಸುಮಾರು 781 ಕ್ರೀಡಾಪಟುಗಳು ಭಾಗವಹಿಸಿದ್ದರು. ಪುರುಷ ಮತ್ತು ಮಹಿಳೆಯರಿಗೆ, 16 ವರ್ಷದೊಳಗಿನ ಬಾಲಕ– ಬಾಲಕಿಯರಿಗೆ, 45 ವರ್ಷ ಮೇಲ್ಪಟ್ಟ ಪುರುಷ ಮತ್ತು ಮಹಿಳೆಯರಿಗೆ ವಿವಿಧ ಹಂತದ ಸ್ಪರ್ಧೆಗಳು ನಡೆದವು.
ಟೌನ್ಹಾಲ್, ಕೋಡಿಬಸವೇಶ್ವರ ದೇವಾಲಯ, ಶಿವಕುಮಾರ ಸ್ವಾಮೀಜಿ ಸರ್ಕಲ್, ಎಸ್ಐಟಿ ಮುಖ್ಯರಸ್ತೆ, ಎಸ್ಎಸ್ಪುರಂ ಮುಖ್ಯರಸ್ತೆ, ರಾಧಾಕೃಷ್ಣ ರಸ್ತೆಯ ಮೂಲಕ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಅಂತ್ಯ ಕಂಡಿತ್ತು.
ಸಂಸದ ಎಸ್.ಪಿ.ಮುದ್ದಹನುಮೇಗೌಡ, ಪಾಲಿಕೆ ಸದಸ್ಯೆ ಗಿರಿಜಾ ಧನಿಯಕುಮಾರ್, ವಿವೇಕಾನಂದ ಕ್ರೀಡಾಕ್ಲಬ್ ಅಧ್ಯಕ್ಷ ರಾಮಕೃಷ್ಣ, ಎಸ್.ಡಿ.ರಾಜಶೇಖರ್, ಚಂದನ್ಕುಮಾರ್ ವಿಜೇತರಿಗೆ ಪ್ರಶಸ್ತಿ ವಿತರಿಸಿದರು.