ತುಮಕೂರು: ಲೋಕಸಭೆ ಚುನಾವಣೆಯಲ್ಲಿ ಶೇ 100 ರಷ್ಟು ಮತದಾನ ಆಗಬೇಕೆಂಬ ಉದ್ದೇಶದಿಂದ ಜಯ ಕರ್ನಾಟಕ ಸಂಘಟನೆಯು ಸೋಮವಾರ ನಗರದಲ್ಲಿ ಮತದಾನ ಜಾಗೃತಿ ಜಾಥಾ ನಡೆಸಿತು.
ನಗರದ ಟೌನ್ಹಾಲ್ ವೃತ್ತದಲ್ಲಿ ಸಮಾವೇಶಗೊಂಡ ಸಂಘಟನಕಾರರು ಎಂ.ಜಿ.ರಸ್ತೆ, ವಿವೇಕಾನಂದ ರಸ್ತೆ, ಅಶೋಕ ರಸ್ತೆ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಯವರಗೆ ಸಾಗಿದರು.
ಜಾಥಾದಲ್ಲಿ ಮತದಾನ ಮಾಡಿ, ಪ್ರಜಾಪ್ರಭುತ್ವ ಉಳಿಸಿ, ಮತದಾನ ಮಾಡಿ, ಅಭಿವೃದ್ದಿಯಲ್ಲಿ ಪಾಲ್ಗೊಳ್ಳಿ ಎಂಬ ನಾಮಫಲಕ ಹಿಡಿದು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಯಕರ್ನಾಟಕದ ರಾಜ್ಯ ಘಟಕದ ಅಧ್ಯಕ್ಷ ಚಂದ್ರಪ್ಪ ಅವರು, ‘ಇತ್ತೀಚಿನ ಚುನಾವಣೆಗಳಲ್ಲಿ ವಿದ್ಯಾವಂತ ಯುವ ಸಮೂಹ, ನಗರದ ಮತದಾರರು ಮತದಾನ ಮಾಡದೇ ಹಿಂದೇಟು ಹಾಕುತ್ತಿದ್ದಾರೆ. ಈ ನಿಟ್ಟಿನಲ್ಲಿ ಎಲ್ಲಾ ಅರ್ಹ ಮತದಾರರು ಮತದಾನ ಮಾಡಬೇಕೆಂಬ ಉದ್ದೇಶವಾಗಿದೆ. ಇದನ್ನು ಮತದಾರರು ಅರ್ಥೈಸಿಕೊಂಡು ಮತದಾನ ಮಾಡಬೇಕು’ ಎಂದು ಕೋರಿದರು.
ಸಂಘಟನೆಯ ಕಾರ್ಯದರ್ಶಿಗಳಾದ ರಾಮಚಂದ್ರಯ್ಯ, ಸೋಮಶೇಖರ್, ರಂಜನ್, ಕೆ.ಉಮಾಶಂಕರ್, ಗಿರೀಶಗೌಡ, ತಿಮ್ಮರಾಜು, ಮುನಿಯಪ್ಪ, ಜಿಲ್ಲಾ ಯುವ ಘಟಕದ ಅಧ್ಯಕ್ಷ ಸಚ್ಚಿನ್, ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ತನ್ವೀರ್ ಇದ್ದರು.