ತುಮಕೂರು: ವಿಶ್ವವಿದ್ಯಾಲಯ ಸಹಭಾಗಿತ್ವದ ಆವಿಷ್ಕಾರ ಮತ್ತು ತರಬೇತಿ ಕೇಂದ್ರವು ಎರಡೂ ವಿ.ವಿಗಳನ್ನು ಜಾಗತಿಕ ಮಟ್ಟದಲ್ಲಿ ಗುರುತಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಲಿದೆ ಎಂದು ಇಂಗ್ಲೆಂಡ್ನ ಸೌತ್ವೇಲ್ಸ್ ವಿ.ವಿಯ ತರಬೇತಿ ವ್ಯವಸ್ಥಾಪಕ ರಿಚಿ ಟರ್ನರ್ ಹೇಳಿದರು.
ವಿ.ವಿಯಲ್ಲಿ ಸೋಮವಾರ ಆಯೋಜಿಸಿದ್ದ ‘ಆವಿಷ್ಕಾರ, ತರಬೇತಿ ಹಾಗೂ ಉದ್ಯಮಶೀಲತೆಗಾಗಿ ಸಹಭಾಗಿತ್ವ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಂಶೋಧನೆ ಆಧಾರಿತ ಅಧ್ಯಯನಗಳಿಂದ ಆವಿಷ್ಕಾರಗಳು ಸಾಧ್ಯವಾಗುತ್ತವೆ. ಪ್ರಾಧ್ಯಾಪಕರು, ವಿದ್ಯಾರ್ಥಿಗಳಿಗೆ ಸಂಶೋಧನೆಯ ಮಹತ್ವ ತಿಳಿಸುವುದೇ ಈ ಸಹಭಾಗಿತ್ವದ ಮುಖ್ಯ ಉದ್ದೇಶ ಎಂದರು.
ಉದ್ಯಮಿ ಎಚ್.ಜಿ.ಚಂದ್ರಶೇಖರ್, ‘ಅವಶ್ಯಕತೆಯು ಆವಿಷ್ಕಾರಗಳ ತಾಯಿ. ವಿದ್ಯಾರ್ಥಿಗಳ ಉತ್ತಮ ಆಲೋಚನೆಗಳಿಂದ ಹೊಸ ಆವಿಷ್ಕಾರಗಳು ಸಾಧ್ಯ’ ಎಂದು ತಿಳಿಸಿದರು.
‘ಆವಿಷ್ಕಾರ, ತರಬೇತಿ ಹಾಗೂ ಉದ್ಯಮಶೀಲತೆಗಾಗಿ ಸಹಭಾಗಿತ್ವ’ ಕೇಂದ್ರದ ಆರಂಭಕ್ಕೆ ವಿ.ವಿ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಮತ್ತು ಸೌತ್ವೇಲ್ಸ್ ವಿ.ವಿ ತರಬೇತಿ ವ್ಯವಸ್ಥಾಪಕ ರಿಚಿ ಟರ್ನರ್ ಸಹಿ ಹಾಕಿದರು.
ಉದ್ಯಮಿಗಳಾದ ಆರ್.ಸುರೇಂದ್ರ ಶಾ, ಅಕ್ಷತಾ ಅಯ್ಯಂಗಾರ್, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಟಿ.ಜೆ.ಗಿರೀಶ್ ಇತರರು ಭಾಗವಹಿಸಿದ್ದರು.