ತುಮಕೂರು: ನಗರದ ಎಲ್ಲ ಕೊಳೆಗೇರಿಗಳ ಸಮಗ್ರ ಅಭಿವೃದ್ಧಿಗೆ ಪಂಚವಾರ್ಷಿಕ ಯೋಜನೆ ರೂಪಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಸಿ.ಸೋಮಶೇಖರ್ ಹೇಳಿದರು.
ಮಂಜುನಾಥನಗರ (ಹೊಸಳಯ್ಯನ ತೋಟ) ಕೊಳೆಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿಯ ನಾಮಫಲಕ ಅನಾವರಣ ಮಾಡುವ ಸಮಿತಿಯ ಶಾಖೆಯನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.
ಭೂಮಿಯ ಹಕ್ಕು, ಸ್ಲಂ ಪ್ರದೇಶದ ಘೋಷಣೆ, ನೋಂದಣಿ ಪತ್ರ ಮತ್ತು ವಸತಿ ಸಮಸ್ಯೆ ನಿವಾರಿಸುವ ದೃಷ್ಟಿಯಿಂದ ಗಾಂಧಿ ಜಯಂತಿಯಂದು ಸ್ಲಂಗಳ ಪ್ರದಕ್ಷಿಣೆ ಮಾಡಿ ಜನರ ನೋವು ನಲಿವು ಆಲಿಸಿ, ಸ್ಥಳದಲ್ಲಿಯೇ ನಗರಸಭೆ, ಕೊಳಚೆ ಮಂಡಳಿ, ಕಂದಾಯ ಇಲಾಖೆ, ಟೂಡಾಗೆ ನಿರ್ದೇಶನ ನೀಡಲಾಗುವುದು ಎಂದರು.
ಇನ್ನು 2 ತಿಂಗಳಲ್ಲಿ ಹೊಸಳಯ್ಯನತೋಟದ ನಿವಾಸಿಗಳಿಗೆ ನೋಂದಣಿ ಪತ್ರ ನೀಡಿ ಫಲಾನುಭವಿಗಳ ಹೆಸರಿಗೆ ಖಾತೆ ಮಾಡಿಕೊಡಲಾಗುವುದು ಎಂದು ಘೋಷಿಸಿದರು.
ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘಟನೆ ರಾಜ್ಯ ಸಂಚಾಲಕ ಎ.ನರಸಿಂಹಮೂರ್ತಿ, ಕೊಳೆಗೇರಿ ನಿವಾಸಿಗಳಿಗೆ ನಮ್ಮ ಭೂಮಿ ಮತ್ತು ವಸತಿ ಹಕ್ಕುಗಳನ್ನು ಪಡೆದುಕೊಳ್ಳಲು ಹೋರಾಟವೊಂದೇ ಸಾಧನ. ಜನಪ್ರತಿನಿಧಿಗಳ ಚುನಾವಣಾ ತಂತ್ರಕ್ಕೆ ಸ್ಲಂ ನಿವಾಸಿಗಳು ಬಲಿಯಾಗಬಾರದು ಎಂದು ಕರೆ ನೀಡಿದರು.
ನಗರಸಭೆ ಮಾಜಿ ಉಪಾಧ್ಯಕ್ಷ ಶ್ರೀನಿವಾಸಪ್ರಸಾದ್, ನಗರಸಭೆ ಸದಸ್ಯ ಸತೀಶ್, ಕೊಳೆಗೇರಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಸೈಯದ್ ಅಲ್ತಾಫ್ ಉಪಸ್ಥಿತರಿದ್ದರು.