ಉಡುಪಿ: ಕೃಷ್ಣಮಠದಲ್ಲಿ ಭಾನುವಾರ ಭಾಗೀರಥಿ ಜನ್ಮದಿನದ ಅಂಗವಾಗಿ ಶ್ರೀಕೃಷ್ಣ ಹಾಗೂ ಮುಖ್ಯಪ್ರಾಣ ದೇವರನ್ನು ಚಿನ್ನದ ರಥದಲ್ಲಿಟ್ಟು ರಥಬೀದಿಯಲ್ಲಿ ಪ್ರದಕ್ಷಿಣೆ ಹಾಕಿಸಿ ಗರ್ಭಗುಡಿ ಸೇರಿಸಲಾಯಿತು.
ಇದಕ್ಕೂ ಮುನ್ನ ಮಧ್ವ ಸರೋವರದ ಬಳಿಯ ಬಾಗೀರಥಿ ಗುಡಿಯ ಎದುರು ಚಿನ್ನದ ತೊಟ್ಟಿಲು ಸೇವೆ ನೆರವೇರಿತು. ಅಷ್ಟಮಠಗಳ ಯತಿಗಳಿಗೆ ಮಾಲಿಕಾ ಮಂಗಳಾರತಿ ನಡೆಸಲಾಯಿತು.
ಸದ್ಯ ದೇವರು ಶಯನೋತ್ಸವದಲ್ಲಿರುವುದರಿಂದ ನಿರ್ಧಿಷ್ಟ ಅವಧಿಯವರೆಗೂ ರಥೋತ್ಸವಗಳು ನಡೆಯುವುದಿಲ್ಲ. ಉತ್ಥಾನ ದ್ವಾದಶಿಯಂದು ಶಯನಾವಸ್ಥೆಯಿಂದ ದೇವರನ್ನು ಹೊರತರಲಾಗುತ್ತದೆ. ಅಂದಿನಿಂದ ಉತ್ಸವಾದಿಗಳಿಗೆ ಚಾಲನೆ ಸಿಗಲಿದೆ.
ಪರ್ಯಾಯ ಅದಮಾರು ಮಠದ ಈಶಪ್ರಿಯ ತೀರ್ಥ ಸ್ವಾಮೀಜಿ, ಕಾಣಿಯೂರು ಮಠದ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ, ಕೃಷ್ಣಾಪುರ ಮಠದ ವಿದ್ಯಾಸಾಗರ ತೀರ್ಥ ಸ್ವಾಮೀಜಿ ಇದ್ದರು. ನವಗ್ರಹ ದಾನವನ್ನು ಮಠದ ಪರಿಚಾರಕ ವರ್ಗಕ್ಕೆ ನೀಡಲಾಯಿತು. ಮಠದ ಪಾರುಪತ್ತೆದಾರರಾದ ಲಕ್ಷ್ಮೀಶ ಆಚಾರ್ಯ ಮುದರಂಗಡಿ ಧಾರ್ಮಿಕ ವಿಧಿವಿಧಾನ ನೆರವೇರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.