ಉಡುಪಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ನ ಮಲ್ಪೆ ವಲಯದ 14 ಒಕ್ಕೂಟಗಳ ಪದಾಧಿಕಾರಿಗಳ ತರಬೇತಿ ಕಾರ್ಯಾಗಾರ ಈಚೆಗೆ ತೆಂಕನಿಡಿಯೂರು ಸಮುದಾಯ ಭವನದಲ್ಲಿ ನಡೆಯಿತು.
ಮಲ್ಪೆ ಠಾಣೆಯ ಪಿಎಸ್ಐ ಸಕ್ತಿವೇಲು ಕಾರ್ಯಕ್ರಮ ಉದ್ಛಾಟಿಸಿ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಮಹಿಳೆಯರಲ್ಲಿ ನಾಯಕತ್ವ ಗುಣ ಬೆಳೆಯುತ್ತಿದೆ. ಧರ್ಮಸ್ಥಳದ ಧರ್ಮದರ್ಶಿ ವಿರೇಂದ್ರ ಹೆಗ್ಗಡೆ ಅವರು ಮಹಿಳೆಯ ಸ್ವಾವಲಂಬನೆ ಹಾಗೂ ನಾಯಕತ್ವ ರೂಪಿಸುವ ಯೋಜನೆಗಳನ್ನು ಜಾರಿಗೆ ತಂದಿರುವುದು ಅಭಿನಂದನೀಯ ಎಂದರು.
ಸಾರ್ವಜನಿಕರು ಪೊಲೀಸ್ ಇಲಾಖೆಯ ಮೇಲೆ ಇರುವ ಭಯ ಬಿಟ್ಟು, ಇಲಾಖೆಯ ಜತೆ ಸಹಕರಿಸಬೇಕು ಎಂದು ಸಲೆಹ ನೀಡಿದ ಸಕ್ತಿವೇಲು, ಅಪಾಯಕ್ಕೆ ಸಿಲುಕಿದಾಗ ಹಾಗೂ ಅನ್ಯಾಯವಾದಾಗ ಪೊಲೀಸರಿಂದ ಹೇಗೆ ನೆರವು ಪಡೆಯಬೇಕು ಎಂದು ಮಾಹಿತಿ ನೀಡಿದರು.
ತಾಲ್ಲೂಕಿನ ಯೋಜನಾಧಿಕಾರಿ ಎಚ್.ರೋಹಿತ್ ಪದಾಧಿಕಾರಿಗಳು ಯೋಜನೆಯ ಶಕ್ತಿಯಾಗಿ ಹಾಗೂ ಒಕ್ಕೂಟದ ಸಂಘಗಳ ಬಲವರ್ಧನೆಗೆ ಸೇವಾ ಮನೋಭಾವನೆಯಿಂದ ಕೆಲಸ ಮಾಡಬೇಕು ಎಂದರು.
2020–21ನೇ ಸಾಲಿನ ಸಾಧಕ ಒಕ್ಕೂಟಗಳಿಗೆ ಅಭಿನಂದನಾಪತ್ರ ನೀಡಲಾಯಿತು. ವಲಯ ಅಧ್ಯಕ್ಷರಾದ ಆಶಾಲತಾ ಅಧ್ಯಕ್ಷತೆ ವಹಿಸಿದ್ದರು. ವಲಯದ ಮೇಲ್ವಿಚಾರಕಿ ಮೂಕಾಂಬಿಕಾ ಸ್ವಾಗತಿಸಿದರು. ಸೇವಾ ಪ್ರತಿನಿಧಿ ಉಮಾ ವಂದಿಸಿದರು.