ಉಡುಪಿ:ಮಲ್ಪೆಯ ಕಡಲ ತೀರ ಶನಿವಾರ ಸಂಜೆ ಮತ ಜಾಗೃತಿಯ ತಾಣವಾಗಿ ಬದಲಾಗಿತ್ತು. ಸಂಜೆ ವಿಹರಿಸಲು ಬಂದವರು ಬಾನಂಗಳದಲ್ಲಿ ಹಾರಾಡುತ್ತಿದ್ದ ಗಾಳಿಪಟಗಳನ್ನು ನೋಡಿ ಖುಷಿಪಟ್ಟರು. ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಕ್ಷಿಸಿ ಸಂಭ್ರಮಿಸಿದರು.
ಜಿಲ್ಲಾ ಸ್ವೀಪ್ ಸಮಿತಿ ಮತ್ತು ಮಲ್ಪೆ ಬೀಚ್ ಅಭಿವೃಧ್ದಿ ಸಮಿತಿ ಸಹಯೋಗದಲ್ಲಿ ಶನಿವಾರ ಸಂಜೆ ಮಲ್ಪೆ ಬೀಚ್ನಲ್ಲಿ ಮತದಾನ ಜಾಗೃತಿ ಅಂಗವಾಗಿ,ಅಂಗವಿಕಲರ ಬೈಕ್ ರ್ಯಾಲಿ, ಅಂಗವಿಕಲ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ, ಗಾಳಿಪಟ ಉತ್ಸವ ಹಮ್ಮಿಕೊಳ್ಳಲಾಗಿತ್ತು.
ಜಿಲ್ಲೆಯ ವಿವಿಧ ಕಡೆಗಳಿಂದ ಬಂದಿದ್ದ ಅಂಗವಿಕಲರು ಮತದಾನ ಜಾಗೃತಿ ಫಲಕಗಳನ್ನು ಹಿಡಿದು ಜನರಲ್ಲಿ ಅರಿವು ಮೂಡಿಸಿದರು. ಮತದಾನ ನಮ್ಮ ಹಕ್ಕು, ಏಪ್ರಿಲ್ 18 ಮತ್ತು 23ರಂದು ಮರೆಯದೇ ಮತದಾನ ಮಾಡೋಣ ಎಂಬ ಸಂದೇಶಗಳಿದ್ದ ಗಾಳಿಪಟಗಳನ್ನು ಹಾರಿಸಿ ಸಂಭ್ರಮಿಸಿದರು.
ಬೆಂಗಳೂರು, ಮೈಸೂರು, ಚಿಕ್ಕಬಳ್ಳಾಪುರ ಮುಂತಾದ ಕಡೆಗಳಿಂದ ಬಂದಿದ್ದ ವೃತ್ತಿಪರ ಗಾಳಿಪಟ ಹಾರಿಸುವವರು ಬಂದಿದ್ದರು. ಟೆಡ್ಡಿಬೇರ್, ಡ್ರಾಗನ್, ರಿಂಗ್, ಸಿಂಗಲ್ ನೋಟ್, ಪೈಪ್ಲೈನ್ ಹಾಗೂ ಎಲ್.ಇ.ಡಿ ಗಾಳಿಪಟಗಳಲ್ಲಿ ರಚಿಸಲಾಗಿದ್ದ ಮತಜಾಗೃತಿ ಸಂದೇಶ ಎಲ್ಲರ ಗಮನ ಸೆಳೆದವು.
ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷೆ ಹಾಗೂ ಜಿಲ್ಲಾ ಪಂಚಾಯಿತಿ ಸಿಇಒ ಸಿಂಧೂ ಬಿ.ರೂಪೇಶ್ ಗಾಳಿಪಟ ಹಾರಿಬಿಟ್ಟು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಖೆ ಉಪ ನಿದೇಶಕಿ ಗ್ರೇಸಿ ಗೊನ್ಸಾಲ್ವಿಸ್, ಮಲ್ಪೆ ಬೀಚ್ ಅಭಿವೃದ್ದಿ ಸಮಿತಿಯ ಸುದೇಶ್ ಶೆಟ್ಟಿ ಉಪಸ್ಥಿತರಿದ್ದರು. ಭಾನುವಾರ ಕೂಡಾ ಗಾಳಿಪಟಗಳ ಹಾರಾಟ ನಡೆಯಲಿದೆ.