ಪಡುಬಿದ್ರಿ (ಉಡುಪಿ ಜಿಲ್ಲೆ): ಪಡುಬಿದ್ರಿ ಬೀಚ್ ಬಳಿ ಗುರುವಾರ ಹೆಜ್ಜೇನು ದಾಳಿಯಿಂದ ರಕ್ಷಿಸಿಕೊಳ್ಳಲು ಸಮುದ್ರಕ್ಕೆ ಹಾರಿದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.
ಸ್ಥಳೀಯ ಮೀನುಗಾರ ವಾಸುದೇವ ಡಿ. ಸಾಲ್ಯಾನ್ (65) ಮೃತರು. ಹೆಜ್ಜೇನು ದಾಳಿಯಿಂದ ಸ್ಥಳೀಯ ಚಂದ್ರಶೇಖರ್ (62) ಹಾಗೂ ಶಂಕರ್ ಅಮೀನ್ (72) ಎಂಬುವರು ಗಾಯಗೊಂಡಿದ್ದು, ಅವರನ್ನು ಸ್ಥಳೀಯರು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಪಡುಬಿದ್ರಿ ಬೀಚ್ ಸಮೀಪ ನಡೆದುಕೊಂಡು ಹೋಗುತಿದ್ದ ವೇಳೆ ಹೆಜ್ಜೇನು ದಾಳಿ ನಡೆಸಿದೆ. ಈ ವೇಳೆ ರಕ್ಷಿಸಿಕೊಳ್ಳಲು ವಾಸುದೇವ ಅವರು ಸಮುದ್ರಕ್ಕೆ ಹಾರಿದ್ದರು. ನೀರಿನಿಂದ ಮೇಲೆ ಬರಲಾಗದೆ ಅವರು ಮೃತಪಟ್ಟಿದ್ದಾರೆ. ಅವರಿಗೆ ಪತ್ನಿ, ಇಬ್ಬರು ಪುತ್ರರು, ಪುತ್ರಿ ಇದ್ದಾರೆ.
ಬೀಚ್ ಪರಿಸರದಲ್ಲಿ ಗುರುವಾರ ಬೆಳಿಗ್ಗೆಯಿಂದ ಹೆಜ್ಜೇನು ಸುತ್ತುತ್ತಿದ್ದವು. ಅದನ್ನು ನೋಡಿ ಹಲವು ಮಂದಿ ಅಲ್ಲಿಂದ ಓಡಿದ್ದರು.