ಉಡುಪಿ: ಕರ್ತವ್ಯ ಲೋಪದ ಆರೋಪದ ಮೇಲೆ ಉಡುಪಿ ನಗರ ಠಾಣೆ ಪಿಎಸ್ಐ ಅನಂತ ಪದ್ಮನಾಭ ಹಾಗೂ ಹೆಡ್ ಕಾನ್ಸ್ಟೆಬಲ್ ಜೀವನ್ ಕುಮಾರ್ ಎಂಬುವರನ್ನು ಎಸ್ಪಿ ನಿಶಾಜೇಮ್ಸ್ ಅಮಾನತುಗೊಳಿಸಿದ್ದಾರೆ.
ಪ್ರಾಥಮಿಕ ವಿಚಾರಣಾ ವರದಿಯ ಆಧಾರದ ಮೇಲೆ ಕರ್ತವ್ಯ ಲೋಪ ಕಂಡುಬಂದ ಕಾರಣ ಇಲಾಖೆಯ ಶಿಸ್ತು, ನಡಾವಳಿ, ಶಿಸ್ತು ಪ್ರಾಧಿಕಾರಕ್ಕೆ ಅನುಗುಣವಾಗಿ ಅಮಾನತು ಮಾಡಲಾಗಿದೆ. ರಾಜಕೀಯ ಮತೀಯವಾದ ಪ್ರೇರಿತ ಕ್ರಮ ಅಮಾನತಿನ ಹಿಂದೆ ಇರುವುದಿಲ್ಲ ಎಂದು ಎಸ್ಪಿ ತಿಳಿಸಿದ್ದಾರೆ.
ಈಚೆಗೆ ಭುಜಂಗ ಉದ್ಯಾನದಲ್ಲಿ ಅನ್ಯಕೋಮಿನ ಯುವಕನೊಬ್ಬ ಯುವತಿಯ ಜತೆ ಅಸಭ್ಯವಾಗಿ ವರ್ತಿಸಿದ್ದ ಎಂಬ ಕಾರಣಕ್ಕೆ ಕೆಲವರು ಯುವಕನಿಗೆ ಥಳಿಸಿದ್ದರು. ಈ ಸಂಬಂಧ ಪ್ರಕರಣ ದಾಖಲು ಮಾಡಿಕೊಂಡಿರಲಿಲ್ಲ ಹಾಗೂ ವಿಚಾರವನ್ನು ಮೇಲಿನ ಅಧಿಕಾರಿಗಳ ಗಮನಕ್ಕೆ ತರಲಿಲ್ಲ ಎಂಬ ಕಾರಣಕ್ಕೆ ಪಿಎಸ್ಐ ಹಾಗೂ ಹೆಡ್ಕಾನ್ಸ್ಟೆಬಲ್ ಅನ್ನು ಅಮಾನತು ಮಾಡಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.