ಕಳೆದ 24 ಗಂಟೆಗಳಲ್ಲಿ ಜಿಲ್ಲೆಯಲ್ಲಿ 7.5 ಸೆ.ಮೀ ಮಳೆಯಾಗಿದೆ. ಉಡುಪಿಯಲ್ಲಿ 8.3, ಕುಂದಾಪುರದಲ್ಲಿ 8.6, ಕಾರ್ಕಳದಲ್ಲಿ 5.3 ಸೆ.ಮೀ ಮಳೆ ಬಿದ್ದಿದೆ. ಕಾಪು ಹಾಗೂ ಉಡುಪಿ ತಾಲ್ಲೂಕಿನ ಹಲವೆಡೆ ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಮರಗಳು ಉರುಳಿಬಿದ್ದು, ವಿದ್ಯುತ್ ಕಂಬಗಳು ಧರೆಗುರುಳಿವೆ. ಕಟಾವಿಗೆ ಬಂದಿದ್ದ ಭತ್ತದ ಜಮೀನು ಜಲಾವೃತಗೊಂಡಿದ್ದು ಅಪಾರ ನಷ್ಟ ಸಂಭವಿಸಿದೆ. ಭಾರಿ ಮಳೆಗೆ ಕೃಷ್ಣಮಠದ ರಥಬೀದಿ ಜಲಾವೃತಗೊಂಡಿದೆ. ಮಂಡಿಯುದ್ದ ನೀರು ನಿಂತಿದ್ದು, ಭಕ್ತರಿಗೆ ಸಮಸ್ಯೆಯಾಯಿತು.