ಉಡುಪಿ: ಪ್ರಸ್ತುತರಾಮನನ್ನು ಎತ್ತರದಲ್ಲಿ ಇಡಲು ಮುಸ್ಲಿಮರ ಜತೆಗೆ ಹೊಡೆದಾಟಕ್ಕೆ ಮುಂದಾಗಿದ್ದೇವೆ. ಅಂದು ಬಾಬರ್ ಮಾಡಿದ ತಪ್ಪನ್ನು ಇಂದು ನಾವೆಲ್ಲ ಮಾಡಲು ಹೊರಟಿದ್ದೇವೆ. ರಾಮನ ದುರ್ಬಳಕೆ ಆಗುತ್ತಿದೆ ಎಂದು ಚಿಂತಕ ಪ್ರಸನ್ನ ಹೆಗ್ಗೋಡು ಹೇಳಿದರು.
ರಥಬೀದಿ ಗೆಳೆಯರು ಉಡುಪಿ ಹಾಗೂ ಮುರಾರಿ ಬಲ್ಲಾಳ ಚಿಂತನ ಫೌಂಡೇಶನ್ ಜಂಟಿ ಆಶ್ರಯದಲ್ಲಿ ಅಂಬಲಪಾಡಿಯ ಮುರಾರಿ ಬಲ್ಲಾಳರ ಮನೆಯಲ್ಲಿ ಮಂಗಳವಾರ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮೂಲ ರಾಮಾಯಣ ಎರಡು ವರ್ಷ ಬ್ರಾಹ್ಮಣರ ಹಿಡಿತದಲ್ಲಿತ್ತು. ಅವರು ಅದರ ರೂಪಕ್ಕೆ ಹಾನಿಯಾಗುವಂತಹ ಸಾಕಷ್ಟು ವಿಚಾರಗಳನ್ನು ಸೇರಿಸಿದ್ದಾರೆ. ಅದನ್ನು ಬಿಟ್ಟು ಓದಿದರೆ, ಇಡೀ ಜಗತ್ತಿನಲ್ಲಿ ರಾಮಾಯಣದಷ್ಟು ಅಸಾಧಾರಣವಾದ ಕೃತಿ ಬೇರೊಂದಿಲ್ಲ ಎಂದರು.
ರಾಮ ಮಾತ್ರವಲ್ಲ, ಎಲ್ಲ ಧರ್ಮಗಳು ಮಾನವ ಧರ್ಮವನ್ನು ಎತ್ತಿ ಹಿಡಿಯುತ್ತವೆ. ಆದರೆ 21ನೇ ಶತಮಾನದಲ್ಲಿ ಅಗತ್ಯವಾಗಿ ಬೇಕಿರುವುದು ಮಾನವ ಧರ್ಮ ಎಂದರು.
ದೇಶದಲ್ಲಿ ನೂರಾರು ವರ್ಷಗಳ ಪರಂಪರೆ ಇರುವ ರಾಮನ ದೇವಸ್ಥಾನಗಳು ಇಲ್ಲ. ಹಠದಿಂದ ರಾಮನನ್ನು ದೇವರನ್ನಾಗಿಸಲು ಹೊರಟಿದ್ದಾರೆ. ಇದು ರಾಮಾಯಣ ಕೃತಿಗೆ ಮಾಡುವ ಅಪಚಾರ ಎಂದು ಟೀಕಿಸಿದರು.
ಪರಿಸರ ಸಮಸ್ಯೆ ಹಾಗೂ ಇಂದಿನ ಧಾರ್ಮಿಕ ಅಸಹಿಷ್ಣುತೆಯ ವಿರುದ್ಧ ಹೋರಾಡುವವರಿಗೆ ರಾಮಾಯಣವೇ ಒಂದು ಪ್ರಣಾಳಿಕೆ. ರಾಮಾಯಣದ ಪ್ರತ್ಯೇಕತೆ ತಪ್ಪು. ಅದನ್ನು ಪ್ರತ್ಯೇಕಿಸಿ ನೋಡಿದರೆ ಜಾತಿ, ವರ್ಗ ಸಂಘರ್ಷ ಶುರುವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಇಂದು ದೇಶದ ಜನತೆ ಆತಂಕಿತರಾಗಿದ್ದಾರೆ. ಮಧ್ಯಮವರ್ಗ ಹೆಚ್ಚು ಆತಂಕಕ್ಕೆ ಒಳಗಾಗಿದೆ. ನಾವೇ ಕಟ್ಟಿಕೊಂಡ ರಾವಣ ಪ್ರಪಂಚದಿಂದ ಹೊರಬರಲು ಆಗುತ್ತಿಲ್ಲ. ಆತಂಕದಿಂದ ರಾಮಾಯಣವನ್ನು ಪ್ರವೇಶ ಮಾಡುತ್ತಿದ್ದೇವೆ. ವರ್ಗ ಸಂಘರ್ಷಕ್ಕೆ ಕಾರಣವಾಗಿರುವ ಅಂಶಗಳನ್ನು ಅಪ್ಪಿ ಹಿಡಿದಿದ್ದೇವೆ. ಅದನ್ನು ಪುರೋಹಿತ ಶಾಹಿ ಮಾಡಿಸುತ್ತಿದೆ ಎಂದು ಆರೋಪಿಸಿದರು.
ರಥಬೀದಿ ಗೆಳೆಯರು ಸಂಘಟನೆಯ ಅಧ್ಯಕ್ಷ ಮುರಳಿಧರ ಉಪಾಧ್ಯಾಯ, ಪ್ರಧಾನ ಕಾರ್ಯದರ್ಶಿ ಪ್ರೊ. ಸುಬ್ರಹ್ಮಣ್ಯ ಜೋಶಿ, ಮುರಾರಿ ಬಲ್ಲಾಳ ಚಿಂತನ ಫೌಂಡೇಶನ್ನ ಸಂತೋಷ್ ಬಲ್ಲಾಳ್ ಉಪಸ್ಥಿತರಿದ್ದರು.