ಉಡುಪಿ: ಕೃಷ್ಣಮಠದಲ್ಲಿ ದೇವರ ದರ್ಶನಕ್ಕೆ ಭಕ್ತರಿಗೆ ವಿಶ್ವಪಥ ಮಾರ್ಗದ ವ್ಯವಸ್ಥೆ ಮಾಡಲಾಗಿದ್ದು, ಜ.18ರಂದು ಮುಖ್ಯಮಂತ್ರಿ ಯಡಿಯೂರಪ್ಪ ಉದ್ಘಾಟಿಸಲಿದ್ದಾರೆ ಎಂದು ಮಠದ ವ್ಯವಸ್ಥಾಪಕ ಗೋವಿಂದರಾಜ್ ತಿಳಿಸಿದರು.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿಗಳು ಕೃಷ್ಣನ ದರ್ಶನದ ಬಳಿಕ ರಾಜಾಂಗಣದಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಕೃಷ್ಣಮಠದಲ್ಲಿ ಕೃಷ್ಣ ಪೂಜಾ ಪರ್ಯಾಯದ 500ನೇ ವರ್ಷದ ಉದ್ಘೋಷ ಮಾಡಲಿದ್ದಾರೆ. ಸಾವಯವ ಅಂಗಡಿಯನ್ನು ಸಿಎಂ ಉದ್ಘಾಟಿಸಲಿದ್ದಾರೆ ಎಂದರು.
ಸಂಜೆ 3.45ಕ್ಕೆ ನಗರದ ಜೋಡುಕಟ್ಟೆಯಿಂದ ಮೇನೆಯಲ್ಲಿ ಶ್ರೀಮಧ್ವ-ವಾದಿರಾಜರ ಕೃತಿಗಳ ಮೆರವಣಿಗೆ ನಡೆಯಲಿದೆ. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಸಿಇಒ ರಾಜಕಿರಣ್ ರೈ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಸಾಂಸ್ಕೃತಿಕ ತಂಡಗಳ ಪ್ರದರ್ಶನ ಇರಲಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಪರ್ಯಾಯ ಅದಮಾರು ಮಠದ ಪಿಆರ್ಒ ಶ್ರೀಶ ಕಡೆಕಾರು, ಕಲಾವಿದ ಪುರುಷೋತ್ತಮ ಅಡ್ವೆ, ವೈ.ಎನ್. ರಾಮಚಂದ್ರ, ಸಂತೋಷ್ ಇದ್ದರು.