ಪಿಯು ಜಿಲ್ಲಾಮಟ್ಟದ ಕೊಕ್ಕೊ ಪಂದ್ಯಾಟಕ್ಕೆ ಚಾಲನೆ
ಬ್ರಹ್ಮಾವರ: ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಪಾಠಗಳ ಜತೆಗೆ ಕ್ರೀಡೆಗಳಲ್ಲಿ ತೊಡಗಿಸಿಕೊಂಡರೆ ಮುಂದಿನ ದಿನಗಳಲ್ಲಿ ಉತ್ತಮ ಭವಿಷ್ಯವಿದೆ. ವಿದ್ಯಾರ್ಥಿದೆಸೆಯಲ್ಲೇ ಕ್ರೀಡಾ ಮನೋಭಾವ ಬೆಳೆಸಿಕೊಳ್ಳುವಂತೆ ಉಡುಪಿ ಲಯನೆಸ್ನ ಕ್ರೀಡಾ ಸಂಯೋಜಕಿ ನಿರುಪಮಾ ಶೆಟ್ಟಿ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಬ್ರಹ್ಮಾವರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಬುಧವಾರ ನಡೆದ ಜಿಲ್ಲಾಮಟ್ಟದ ಪದವಿ ಪೂರ್ವ ವಿದ್ಯಾರ್ಥಿಗಳ ಕೊಕ್ಕೊ ಪಂದ್ಯಾಟಕ್ಕೆ ಅವರು ಚಾಲನೆ ನೀಡಿ ಮಾತನಾಡಿದರು.
ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಿದಲ್ಲಿ ಆರೋಗ್ಯಪೂರ್ಣವಾಗಿರಬಹುದು. ಗ್ರಾಮೀಣ ಪ್ರತಿಭೆಗಳಿಗೆ ಇಂತಹ ಕ್ರೀಡಾ ಚಟುವಟಿಕೆಗಳು ರಾಷ್ಟ್ರಮಟ್ಟದಲ್ಲಿ ಮಿಂಚಲು ಸಹಕಾರಿಯಾಗಲಿದೆ ಎಂದರು.
ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಡುಪಿ ಜಿಲ್ಲಾ ಉಪನಿರ್ದೇಶಕ ಎಸ್.ಎಸ್.ಶಿಂಧಾ ಮಾತನಾಡಿ ಸೋಲು ಗೆಲುವು ಎಲ್ಲಾ ಕ್ಷೇತ್ರಗಳಲ್ಲಿ ಸಹಜ. ಅದನ್ನು ಸಮಾನವಾಗಿ ಸ್ವೀಕರಿಸಿ ಮುಂದೆ ನಡೆಯುವುದೇ ಜೀವನ ಎಂದು ಹೇಳಿ ಕ್ರೀಡಾಳುಗಳನ್ನು ಹುರಿದುಂಬಿಸಿದರು.ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಭಾಸ್ಕರ್ ರೈ ಅಧ್ಯಕ್ಷತೆ ವಹಿಸಿದ್ದರು.
ಉಡುಪಿ ಲಯನ್ಸ್ ಅಧ್ಯಕ್ಷರಾದ ಇಂದೂ ರಮಾನಂದ ಭಟ್, ಉಪಪ್ರಾಂಶುಪಾಲ ಬಿ.ಟಿ.ನಾಯ್ಕ, ಲಯನೆಸ್ನ ಚಂದ್ರಿಕಾ ರವೀಶ್, ಮಮತಾ ಶೆಟ್ಟಿ, ಲಯನ್ಸ್ನ ರೇಖಾ ಪೈ, ದೈಹಿಕ ಶಿಕ್ಷಕರ ಸಂಘದ ಗೌರವಾಧ್ಯಕ್ಷ ವಸಂತ ಶೆಟ್ಟಿ, ದೈಹಿಕ ಶಿಕ್ಷಕ ಮಂಜುನಾಥ್ ಶೆಟ್ಟಿ, ಶಾಲಾಭಿವೃದ್ಧಿ ಸಮಿತಿಯ ರಘುಪತಿ ಬ್ರಹ್ಮಾವರ, ಪೇತ್ರಿ ಮಡಿಯ ಉದ್ಯಮಿ ಹಾಗೂ ಕ್ರೀಡಾಭಿಮಾನಿ ರಾಜೀವ ಆಳ್ವ ಮತ್ತಿತರರು ಉಪಸ್ಥಿತರಿದ್ದರು.