ಉಡುಪಿ: ಬ್ರಹ್ಮ ಬೈದರ್ಕಳ ಗರೋಡಿಗಳಲ್ಲಿ ಆರಾಧನೆಗೆ ಜಾತಿ ಭೇದಕ್ಕೆ ಅವಕಾಶವಿಲ್ಲ ಎಂದು ಉದ್ಯಮಿ ಪ್ರಮೋದ್ ಮಧ್ವರಾಜ್ ಹೇಳಿದರು.
ಇಲ್ಲಿಗೆ ಸಮೀಪದ ಮಾರ್ಪಳ್ಳಿ ಬ್ರಹ್ಮ ಬೈದರ್ಕಳ ಗರೋಡಿ ಆಶ್ರಯದಲ್ಲಿ ಭಾನುವಾರ ನಡೆದ ಗರೋಡಿ ಆರಾಧಕರ ಸಮ್ಮೇಳನ `ಪತ್ತೇರಿ ಕೂಟ~ ಉದ್ಘಾಟಿಸಿ ಅವರು ಮಾತನಾಡಿದರು.
ಗರೋಡಿಗಳ ಆರಾಧನೆ ನಿಯಮಗಳು ಇತರ ದೈವಾರಾಧನೆಗಿಂತ ಭಿನ್ನವಾಗಿದೆ. ಗರೋಡಿಗಳಲ್ಲಿ ಭಕ್ತಿಗೆ ಪ್ರಾಧಾನ್ಯತೆ, ಆಡಂಬರಕ್ಕೆ ಅವಕಾಶವಿಲ್ಲ ಎಂದರು.
ಗರೋಡಿಗಳ ಆರಾಧನೆ ಬಗ್ಗೆ ಚಿಂತನ-ಮಂಥನ ನಡೆಸುವ ಸಂದರ್ಭ ಬಂದಿದೆ. ಸಮ್ಮೇಳನದಲ್ಲಿ ನಡೆಯುವ ಚರ್ಚೆಯಿಂದ ಬರುವ ನಿರ್ಣಯಗಳನ್ನು ಅನುಷ್ಠಾನಕ್ಕೆ ತರಲು ಸಮಿತಿ ರಚಿಸಬೇಕು ಎಂದರು.
ಜಾನಪದ ವಿದ್ವಾಂಸ ಡಾ.ಗಣನಾಥ ಎಕ್ಕಾರು ಮಾತನಾಡಿ, ಆಧುನಿಕ ಕಾಲಘಟ್ಟಕ್ಕೆ ತಕ್ಕಂತೆ ಪರಂಪರೆಯ ಮೂಲ ಉಳಿಸುವ ನಿಟ್ಟಿನಲ್ಲಿ ಈ ಸಮ್ಮೇಳನ ಆಯೋಜಿಸಲಾಗಿದೆ. ಇಂದಿನ ಪೀಳಿಗೆಗೆ ದೈವಾರಾಧನೆ ಬಗ್ಗೆ ತಿಳಿ ಹೇಳುವ ವಿಚಾರ ಗೋಷ್ಠಿಗಳು ಹೆಚ್ಚು ನಡೆಯಬೇಕು ಎಂದರು.
ಗರೋಡಿ ಅಭಿವೃದ್ಧಿ ಸಮಿತಿ ಅಧ್ಯಕ್ಷ ಪ್ರಭಾಕರ ಹೆಗ್ಡೆ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಸದಸ್ಯ ದಿವಾಕರ್ ಕುಂದರ್, ಅಲೆವೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಹರೀಶ್ ಕಿಣಿ, ಗರೋಡಿ ಅಭಿವೃದ್ಧಿ ಸಮಿತಿ ಗೌರವಾಧ್ಯಕ್ಷ ಕೆಮ್ತೂರು ಸುಂದರ ಶೆಟ್ಟಿ ಉಪಸ್ಥಿತರಿದ್ದರು.