ಕಾರ್ಕಳ: ದೇವರ ವ್ಯಕ್ತ ರೂಪವೇ ಪ್ರೀತಿ ಮತ್ತು ಸೇವೆ ಎಂದು ಐಕಳ ಪಾಂಪೆ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಫಾದರ್ ಜೆರೋಮ್ ಡಿಸೋಜಾ ತಿಳಿಸಿದರು.
ತಾಲ್ಲೂಕಿನ ಬೆಳ್ಮಣ್ ಕೆಥೊಲಿಕ್ ಸಭಾ ಹಾಗೂ ಲಯನ್ಸ್ ಕ್ಲಬ್ನ ಆಶ್ರಯದಲ್ಲಿ ಇತ್ತೀಚೆಗೆ ನಡೆದ ಕ್ರಿಸ್ ಸೌಹಾರ್ದ ಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಣ್ಣಿಗೆ ಕಾಣದ ದೇವರು ನಮ್ಮ ಮನಸ್ಸು ಮತ್ತು ಕಲ್ಪನೆಯಲ್ಲಿ ನಿರಂತರ ಬೆಳಗುತ್ತಿ ರುತ್ತಾನೆ. ಎಲ್ಲ ಧರ್ಮಗಳ ಸಾರಾಂಶವೂ ಇದೇ ಆಗಿದೆ ಎಂದರು,
ಯಕ್ಷಗಾನ ಪ್ರಸಂಗಕರ್ತ ಹಾಗೂ ಕಲಾವಿದ ಶ್ರೀಧರ ಡಿ.ಎಸ್.ಮಾತನಾಡಿ ಧರ್ಮವೆಂದರೆ ಚೆನ್ನಾಗಿ ನಡೆಯುವುದು. ಅದರಿಂದ ತನಗೂ ಇತರರರಿಗೂ ಒಳಿತಾಗುವಿಕೆಯೇ ಧರ್ಮ ಎಂದು ಹೇಳಿದರು.
ತಾಲ್ಲೂಕು ಅಲ್ಪಸಂಖ್ಯಾತ ವೇದಿಕೆಯ ಕಾರ್ಯದರ್ಶಿ ಕೆ.ಶಾಬುಲಾಲ್ ಇಸ್ಲಾಂ ಹಬ್ಬದ ಮಹತ್ವವನ್ನು ಸರ್ವರಿಗೂ ತಿಳಿಸಿದರು.
ಲಯನ್ಸ್ ಕ್ಲಬ್ನ ಅಧ್ಯಕ್ಷ ಬಿ.ಸೀತಾ ರಾಮ ಭಟ್ ಅಧ್ಯಕ್ಷತೆ ವಹಿಸಿದ್ದರು. ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷ ಗ್ರೆಗರಿ ಮಿನೆಜಸ್, ಲಯನೆಸ್ ಅಧ್ಯಕ್ಷೆ ಮಾಯಾ ಚರಣ್, ಲಿಯೋ ಅಧ್ಯಕ್ಷ ಕೆವಿನ್ ಡಿಮೆಲ್ಲೊ ಮತ್ತಿತರರು ಇದ್ದರು.
ಕೆಥೊಲಿಕ್ ಸಭಾದ ಅಧ್ಯಕ್ಷ ಜಾನ್ ಮಥಾಯಸ್ ಸ್ವಾಗತಿಸಿದರು. ಸೆವೆರಿನ್ ಡಿಸೋಜಾ ಕಾರ್ಯಕ್ರಮ ನಿರೂಪಿಸಿದರು. ಲಯನ್ ಕಾರ್ಯದರ್ಶಿ ಕಿರಣ್ ಚೌಟ ವಂದಿಸಿದರು. ಸೌಹಾರ್ದ ಕೂಟದ ಅಂಗವಾಗಿ ಕಿರು ಪ್ರಹಸನ ಎಲ್ಲರ ಗಮನ ಸೆಳೆಯಿತು.