ಚನ್ನಪಟ್ಟಣ: ’ನಮ್ಮ ಸುತ್ತಲಿನ ಪರಿಸರ ಸ್ವಚ್ಚವಾಗಿಟ್ಟುಕೊಳ್ಳದ ಹೊರತು ಆರೋಗ್ಯವಂತ ಜೀವನ ನಡೆಸುವುದು ಅಸಾಧ್ಯ’ ಎಂದು ಸಾಹಿತಿ ವಿಜಯ್ ರಾಂಪುರ ತಿಳಿಸಿದರು.
ಕರಿಕಲ್ ದೊಡ್ಡಿ ಗ್ರಾಮದಲ್ಲಿ ರಾಷ್ಟ್ರೀಯ ಕುಡಿಯುವ ನೀರು ಮತ್ತು ನೈರ್ಮಲ್ಯ ಯೋಜನೆ ಕಾರ್ಯಕ್ರಮದಡಿ ಬುಧವಾರ ಏರ್ಪಡಿಸಿದ್ದ ‘ಬೀದಿನಾಟಕ ಪ್ರದರ್ಶನ’ದಲ್ಲಿ ಅವರು ಮಾತನಾಡಿದರು.
’ಪ್ರಸ್ತುತ ಆರೋಗ್ಯವೇ ಬಹುದೊಡ್ಡ ಆಸ್ತಿ. ಅನಾರೋಗ್ಯದ ಮೂಲವೇ ಅನೈರ್ಮಲ್ಯ. ಶುದ್ಧ ಕುಡಿಯುವ ನೀರನ್ನು ಬಳಸುವುದರಿಂದ ಹಾಗೂ ಸ್ವಚ್ಛತೆಯ ಬಗೆಗೆ ಸ್ವಯಂ ಕಾಳಜಿ ವಹಿಸುವುದರಿಂದ ಆರೋಗ್ಯವಂತರಾಗಿ ಇರಬಹುದು. ಆಧುನಿಕ ಜೀವನ ಶೈಲಿಯ ಜೊತೆಗೆ ಪರಿಸರ ಕಾಳಜಿ ಇಲ್ಲದಿರುವುದು ನೆಮ್ಮದಿಯ ಜೀವನಕ್ಕೆ ಧಕ್ಕೆಯುಂಟಾಗಿದೆ’ ಎಂದು ತಿಳಿಸಿದರು.
ಹಿರಿಯ ಜಾನಪದ ಗಾಯಕ ಚೌ.ಪು.ಸ್ವಾಮಿ ಮಾತನಾಡಿ, ’ಚರಂಡಿ, ಗುಂಡಿಗಳಲ್ಲಿ ನಿಂತ ನೀರು ಮತ್ತು ತ್ಯಾಜ್ಯ ವಸ್ತುಗಳಿಂದ ಸೊಳ್ಳೆ ಹಾಗೂ ಕ್ರಿಮಿಕೀಟಗಳು ಉತ್ಪತ್ತಿಯಾಗಿ ರೋಗಗಳು ಬಹು ಬೇಗ ಹರಡುತ್ತಿವೆ. ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಸಾಂಕ್ರಾಮಿಕ ರೋಗಗಳು ಉಲ್ಬಣಗೊಳ್ಳುತ್ತಿವೆ. ಸಾರ್ವಜನಿಕರು ಈ ಬಗ್ಗೆ ಎಚ್ಚರ ವಹಿಸಬೇಕು’ ಎಂದರು.
ಯುವ ಕವಿ ಅಬ್ಬೂರು ಶ್ರೀನಿವಾಸು ಮಾತನಾಡಿ, ’ಪರಿಸರ ಕಾಪಾಡಿಕೊಳ್ಳುವ ವಿಚಾರದ ಬಗ್ಗೆ ಸಾರ್ವಜನಿಕರಲ್ಲಿ ಅರಿವಿನ ಕೊರತೆ ಇದೆ. ಇಂತಹ ಬೀದಿ ನಾಟಕ ಪ್ರದರ್ಶನಗಳು ಗ್ರಾಮೀಣರಲ್ಲಿ ನೈರ್ಮಲ್ಯದ ಬಗ್ಗೆ ಜಾಗೃತಿ ಹೊಂದಲು ಸಹಕಾರಿಯಾಗಿವೆ’ ಎಂದರು.
ಶಿಕ್ಷಕ ಚಕ್ಕೆರೆ ಪುಟ್ಟಸ್ವಾಮಿ, ಗ್ರಂಥಪಾಲಕ ಶಿವರಾಮು, ವಂದಾರಗುಪ್ಪೆ ರಮೇಶ್ ಹಾಗೂ ಗ್ರಾಮಸ್ಥರು ಹಾಜರಿದ್ದರು. ಜಾಗೃತಿ ಗೀತೆಗಳನ್ನು ಹಾಡಲಾಯಿತು.