ತಿಪ್ಪಸಂದ್ರ(ಮಾಗಡಿ): ಕೃಷಿ ರಂಗದಲ್ಲಿ ಶೇ 85ರಷ್ಟು ಬೀಜ ಸಂಗ್ರಹಣೆಯಿಂದ ಒಕ್ಕಣೆಯವರೆಗೆ ಕೆಲಸ ಮಾಡುತ್ತಿರುವ ಸ್ತ್ರೀಯರು ಯಂತ್ರೋಪಕರಣ ಬಳಸಿ ಶ್ರಮ ಕಡಿಮೆ ಮಾಡಿಕೊಳ್ಳಲು ಮುಂದಾಗಬೇಕು ಎಂದು ಕೃಷಿ ವಿಜ್ಞಾನಿ ಡಾ. ಲತಾ. ಆರ್. ಕುಲಕರ್ಣಿ ತಿಳಿಸಿದರು.
ಕೃಷಿ ವಿಜ್ಞಾನ ಕೇಂದ್ರ ಮತ್ತು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಸೋಮವಾರ ದೊಡ್ಡಮುದುಗೆರೆಯಲ್ಲಿ ನಡೆದ ‘ಮಹಿಳಾ ಕಿಸಾನ್ ದಿವಸ್’ ಉದ್ಘಾಟಿಸಿ ಮಾತನಾಡಿದರು.
ಉಪಕಸುಬುಗಳಾದ ಹೈನುಗಾರಿಕೆ, ರೇಷ್ಮೆ, ಕುರಿ, ಮೇಕೆ ಸಾಕಾಣಿಕೆಯಲ್ಲಿ ಮಹಿಳೆಯರ ಪಾತ್ರ ಬಹಳ ಮುಖ್ಯವಾಗಿದೆ. ಈ ಚಟುವಟಿಕೆ ಮಹಿಳೆಯರಿಗೆ ಹೆಚ್ಚು ಶ್ರಮದಾಯಕವಾಗಿದ್ದು ಅವರ ಆರೋಗ್ಯ ಮತ್ತು ಆದಾಯದ ಮೇಲೆ ನೇರ ಪರಿಣಾಮ ಬೀರುತ್ತದೆ. ವಿಜ್ಞಾನಿಗಳ ಸಲಹೆ ಪಡೆಯಲು ಮಹಿಳೆಯರು ಮುಂದಾಗಬೇಕು ಎಂದರು.
ಕೃಷಿ ವಿಜ್ಞಾನಿ ಡಾ. ದಿನೇಶ್ ಮಾತನಾಡಿ, ಮೇವಿನ ಬೆಳೆಗಳ ಸಮಗ್ರ ನಿರ್ವಹಣೆ ಮತ್ತು ವೈಜ್ಞಾನಿಕವಾಗಿ ಹೈನುಗಾರಿಕೆ ಮಾಡುವ ವಿಧಾನ ಕುರಿತಂತೆ ಮಾಹಿತಿ ತಿಳಿಸಿದರು. ಡಾ. ರಾಜೇಂದ್ರ ಪ್ರಸಾದ್ ಈ ದಿನದ ಆಚರಣೆಯ ಮಹತ್ವ ತಿಳಿಸಿದರು.
‘ಕೃಷಿಯಲ್ಲಿ ಮಹಿಳೆಯರ ಪಾತ್ರ’ ಕುರಿತು ಮಹಿಳೆಯರಿಗೆ ಚರ್ಚಾ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ವಿಜೇತರಾದ ಗಾಯಿತ್ರಮ್ಮ, ಕೃಷ್ಣಮ್ಮ ಮತ್ತು ಗಂಗಮ್ಮ ಅವರಿಗೆ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನ ನೀಡಲಾಯಿತು.
ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಸಂಸ್ಥೆಯ ಕ್ಷೇತ್ರ ಅಧಿಕಾರಿ ಶಶಿಕುಮಾರ್ ಮತ್ತು ಕುಮಾರ್ ಇದ್ದರು. ಮುದಿಗೆರೆ ಕಾಲೊನಿ ಮಹಿಳೆಯರು ಮತ್ತು ಪುರುಷರು ಭಾಗವಹಿಸಿದ್ದರು.