ಶಿರಸಿ: ‘ದುಶ್ಚಟದಿಂದ ಸಮಾಜದ ಸ್ವಾಸ್ಥ್ಯ ಹದಗೆಡುತ್ತದೆ. ಅದರಿಂದ ಹೊರಬಂದು ಸಕಾರಾತ್ಮಕ ಬದುಕು ರೂಪಿಸಿಕೊಂಡವರು ಮಾದರಿಯಾಗಿ ಬಾಳಬೇಕು’ ಎಂದು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಶಿಬಿರಾಧಿಕಾರಿ ನಂದಕುಮಾರ್ ಹೇಳಿದರು.
ಇಲ್ಲಿನ ಗಣೇಶ ನಗರದಲ್ಲಿ ಬುಧವಾರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್, ಕರ್ನಾಟಕ ಜನಜಾಗೃತಿ ವೇದಿಕೆ ಶಿರಸಿ ಘಟಕ, ಪ್ರಗತಿಬಂಧು ಸ್ವಸಹಾಯ ಸಂಘಗಳ ಶಿರಸಿ ವಲಯ ಒಕ್ಕೂಟದ ಸಹಯೋಗದಲ್ಲಿ ಮದ್ಯವರ್ಜನ ಶಿಬಿರಕ್ಕೆ ಸೇರಿ ಪಾನಮುಕ್ತರಾದ ನವಜೀವನ ಸಮಿತಿ ಸದಸ್ಯರ ವಿಶೇಷ ಸಭೆಯಲ್ಲಿ ಮಾತನಾಡಿದರು.
ಗ್ರಾಮಾಭಿವೃದ್ಧಿ ಯೋಜನೆಯ ತಾಲ್ಲೂಕು ಯೋಜನಾಧಿಕಾರಿ ರವಿರಾಜ ನಾಯಕ, ‘ಮದ್ಯಪಾನದಂತಹ ದುಶ್ಚಟ ಬಿಟ್ಟು ಹೊಸ ಜೀವನ ರೂಪಿಸಿಕೊಂಡವರಲ್ಲಿ ಹಲವರು ಸ್ವ ಉದ್ಯಮ ಆರಂಭಿಸಿ ಯಶಸ್ಸು ಕಂಡಿದ್ದಾರೆ. ಇದೇ ಯಶಸ್ಸು ಮುಂದುವರಿಯಲಿ’ ಎಂದರು.
ಒಕ್ಕೂಟದ ಅಧ್ಯಕ್ಷ ಮಾರುತಿ ಬೋವಿ ವಡ್ಡರ್, ಉಪಾಧ್ಯಕ್ಷೆ ಶಿಲ್ಪಾ ನಾಯ್ಕ, ಕಾರ್ಯದರ್ಶಿ ಗೀತಾ ಆಚಾರ, ಅರುಣ್ ಶೆಟ್ಟಿ, ಜಯಾ, ರೋಹಿಣಿ, ಗೀತಾ ಇದ್ದರು.