ಕಾರವಾರ: ಹಾಲಕ್ಕಿ ಸಮುದಾಯದವರು ಪ್ರತಿ ವರ್ಷ ಯುಗಾದಿ ದಿನದಂದು ಆಚರಿಸುತ್ತಿದ್ದ ವಿಶಿಷ್ಟ ‘ಹಗರಣ’ ಪ್ರದರ್ಶನಕ್ಕೆ ಈ ಬಾರಿಯೂ ಕೊರೊನಾ ಅಡ್ಡಿಯಾಗಿದೆ. ಹಿಂದಿನಿಂದಲೂ ಬಂದಿರುವ ಸಂಪ್ರದಾಯವನ್ನು ಏಕಾಏಕಿ ನಿಲ್ಲಿಸಲಾಗದು ಎಂದು ಕೆಲವೇ ಮಂದಿ ಹಗರಣ ಆಚರಣೆ ಮಾಡಿದರು.
ಅಂಕೋಲಾ ತಾಲ್ಲೂಕಿನ ಬಡಗೇರಿಯ ಸುತ್ತಮುತ್ತ ಹಗರಣವು ಹಬ್ಬದ ವಾತಾವರಣವನ್ನೇ ಸೃಷ್ಟಿಸುತ್ತದೆ. ಕಳೆದ ವರ್ಷ ಯುಗಾದಿಯಂದು ಕೋವಿಡ್ ಕಾರಣದಿಂದ ಜನತಾಕರ್ಫ್ಯೂ ಮತ್ತು ನಿಷೇಧಾಜ್ಞೆ ವಿಧಿಸಲಾಗಿತ್ತು. ಹಾಗಾಗಿ ಯಾವುದೇ ಸಭೆ, ಸಮಾರಂಭಗಳ ಆಯೋಜನೆಗೆ ಅವಕಾಶ ಇರಲಿಲ್ಲ. ಈ ಬಾರಿ ಕೊರೊನಾದ ಎರಡನೇ ಅಲೆಯಲ್ಲಿ ಸೋಂಕಿತರ ಪ್ರಕರಣಗಳು ಮತ್ತಷ್ಟು ಏರಿಕೆ ಕಾಣುತ್ತಿವೆ. ಹಾಗಾಗಿ ಸರ್ಕಾರದ ನಿಯಮಾವಳಿಯಂತೆ ಆಚರಣೆಗೆ ಸೀಮಿತ ಅವಕಾಶ ದೊರೆಯಿತು.
ಸಮಾಜದ ಆಗುಹೋಗುಗಳನ್ನು ವಿಡಂಬನಾತ್ಮಕವಾಗಿ ಪ್ರದರ್ಶಿಸುವ ಆಚರಣೆಯು ಅನಾದಿ ಕಾಲದಿಂದಲೂ ಜಾರಿಯಲ್ಲಿದೆ. ಇದನ್ನು ನೋಡಲು ಸಾವಿರಾರು ಜನ ದೂರದ ಊರುಗಳಿಂದಲೂ ಬರುತ್ತಿದ್ದರು. ಮಂಗಳವಾರ ಬಡಗೇರಿಯಲ್ಲಿ ಪದ್ಧತಿಯಂತೆ ಮೂರು– ನಾಲ್ಕು ಮನರಂಜನಾ ಹಗರಣಗಳನ್ನು ಯುವಕರು ಪ್ರದರ್ಶಿಸಿದರು.
ಕೋವಿಡ್ ಪೀಡಿತರಿಗೆ ಚಿಕಿತ್ಸೆ ನೀಡುವ ವೈದ್ಯರು, ಬುಡಕಟ್ಟು ಜನರ ನೃತ್ಯ, ಪ್ರಧಾನಿ ನರೇಂದ್ರ ಮೋದಿ, ಮಠಾಧೀಶರು ಮುಂತಾದ ವಿಷಯಗಳಿಗೆ ಸಂಬಂಧಿಸಿದ ರೂಪಕಗಳನ್ನು ಆಯೋಜಿಸಿದ್ದರು.