ಕಾರವಾರ: 'ಅಕಾಡೆಮಿಗಳಿಗೆ ನಾವು ಆಯ್ಕೆ ಮಾಡಿರುವವರು ಉಂಡ ಮನೆಗೆ ದ್ರೋಹ ಮಾಡುವವರಲ್ಲ. ಯೋಗ್ಯರನ್ನೇ ನೇಮಕ ಮಾಡಿದ್ದೇವೆ' ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ ರವಿ ರಾಜ್ಯ ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡರು.
ನಗರದಲ್ಲಿ ಶನಿವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, 'ಅಕಾಡೆಮಿಗಳಿಗೆ ಅಯೋಗ್ಯರನ್ನೇ ನೇಮಕ ಮಾಡಲಾಗಿದೆ' ಎಂಬ ವಿರೋಧ ಪಕ್ಷದ ಮುಖಂಡರ ಹೇಳಿಗೆ ತಿರುಗೇಟು ನೀಡಿದರು.
'ಕತ್ತೆಗೆ ಕಸ್ತೂರಿ ವಾಸನೆ ಗೊತ್ತಾಗುವುದಿಲ್ಲ. ದೇಶದ ವಿರುದ್ಧ ಮಾತನಾಡುವ ತುಕಡೆ ಗ್ಯಾಂಗಿನವರಿಗೆ ನಾವು ಬೆಂಬಲ ಕೊಟ್ಟಿಲ್ಲ. ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗ, ಕಾಶ್ಮೀರವನ್ನು ಪ್ರತ್ಯೇಕ ಮಾಡಬೇಕು ಎಂದು ಬಯಸುವವರಿಗೆ ಬೆಂಬಲ ಮಾಡುವ ಕೆಲಸ ಮಾಡುತ್ತಿತ್ತು. ನಾವು ಅಂತಹ ಕೆಲಸ ಮಾಡಿಲ್ಲ' ಎಂದರು.
ರೈತರನ್ನು ನಿರ್ಲಕ್ಷಿಸಿಲ್ಲ
'ಮಹದಾಯಿ ಹೋರಾಟದಲ್ಲಿ ನಾವು ರೈತರನ್ನನಿರ್ಲಕ್ಷಿಸುವ ಪ್ರಶ್ನೆಯೇ ಇಲ್ಲ. ನಾವು ಕಾನೂನಾತ್ಮಕ ತೊಡಕನ್ನು ಬಗೆಹರಿಸುವ ಕೆಲಸ ಮಾಡುತ್ತೇವೆ. ರಾಜಕೀಯ ಹೋರಾಟ ಬೇರೆ, ರೈತರ ಹೋರಾಟ ಬೇರೆ. ರೈತರ ಹೋರಾಟದ ಜತೆ ನಾವಿದ್ದೇವೆ' ಎಂದು ತಿಳಿಸಿದರು.