ಶಿರಸಿ: ತಾಲ್ಲೂಕಿನ ಹಲಗದ್ದೆ ಗ್ರಾಮ ಪಂಚಾಯ್ತಿ ಸದಸ್ಯ ಅರವಿಂದ ತೇಲಗುಂದ ಅವರು ತಮ್ಮ ಒಂದು ವರ್ಷದ ಗೌರವಧನವನ್ನು ಕೊರ್ಲಕಟ್ಟಾದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ದೇಣಿಗೆಯಾಗಿ ನೀಡಿದ್ದಾರೆ.
ತಮ್ಮ ಜನ್ಮದಿನದ ಪ್ರಯುಕ್ತ ಸೋಮವಾರ ಶಾಲೆಗೆ ಭೇಟಿ ನೀಡಿದ ಅವರು ವರ್ಷಕ್ಕೆ ಪಂಚಾಯತರಾಜ್ ಇಲಾಖೆ ನೀಡುವ ₹12 ಸಾವಿರ ಮೊತ್ತವನ್ನು ಶಾಲೆಗೆ ಹಸ್ತಾಂತರಿಸುವುದಾಗಿ ತಿಳಿಸಿದರು. ಅಷ್ಟು ಮೊತ್ತದ ಚೆಕ್ನ್ನು ಶಾಲಾ ಅಭಿವೃದ್ಧಿ ಸಮಿತಿಗೆ ಹಸ್ತಾಂತರಿಸಿದರು. ವಿದ್ಯಾರ್ಥಿಗಳಿಗೆ ಊಟಕ್ಕೆ ಅಗತ್ಯ ಬೇಳೆಕಾಳುಗಳನ್ನು ವಿತರಿಸಿದರು.
‘ಗ್ರಾಮೀಣ ಭಾಗದಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯಲಿ ಎಂಬ ಹಂಬಲವಿದೆ. ಈ ಕಾರಣಕ್ಕೆ ಕೈಲಾದಷ್ಟು ಸಹಾಯವನ್ನು ಶಾಲೆಗೆ ಮಾಡಲಿದ್ದೇನೆ’ ಎಂದು ಅರವಿಂದ ತೇಲಗುಂದ ಹೇಳಿದರು.
ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಮಂಜುನಾಥ ಭೋವಿವಡ್ಡರ, ಮುಖ್ಯ ಶಿಕ್ಷಕ ದಶರಥ ವಾಗ್ಮೊರೆ, ಗ್ರಾಮ ಪಂಚಾಯ್ತಿ ಕಾರ್ಯದರ್ಶಿ ಐ.ಜಿ.ಚೆನ್ನಯ್ಯ, ಶೇಖರ ಕಬ್ಬೇರ, ಸುರೇಶ ಕಬ್ಬೇರ ಇದ್ದರು.