ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರೇನ್‌ಬೊ’ದಲ್ಲಿ ರಾಜ್‌ ಉತ್ಸವ

Last Updated 5 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಎಫ್‌.ಎಂ. ರೇನ್‌ಬೊ (101.3) ಏಪ್ರಿಲ್‌ ತಿಂಗಳ ಪೂರ್ತಿ ವರನಟ ಡಾ. ರಾಜ್‌ ಕುಮಾರ್‌ ಅವರನ್ನು ಸ್ಮರಿಸುವ ಉತ್ಸವ ಹಮ್ಮಿಕೊಂಡಿದೆ. ಕನ್ನಡದ ಮೇರುನಟ ಡಾ. ರಾಜ್‌ ಅವರ ಜನ್ಮದಿನ ಏಪ್ರಿಲ್‌ 24. ಅವರ ಪುಣ್ಯತಿಥಿಯ ದಿನ ಏ.12 (ನಿಧನದ ದಿನ). ಈ ಹಿನ್ನೆಲೆಯಲ್ಲಿ ಎಫ್‌.ಎಂ ರೇನ್‌ಬೊ ಇಡೀ ತಿಂಗಳು ರಾಜ್‌ ಅವರನ್ನು ಸ್ಮರಿಸಲಿದೆ.

ರಾಜ್‌ಕುಮಾರ್‌ ಉತ್ಸವದ ಅಂಗವಾಗಿ ‘ರಾಜ್‌ ರಸ ನಿಮಿಷ’ದ ಪ್ರಸಾರ ಆರಂಭವಾಗಿದೆ. ಡಾ. ರಾಜ್‌ ಕುಮಾರ್‌ ಅವರ ಜೀವನ, ಬೆಳೆದು ಬಂದ ಹಾದಿ, ಮೇರು ನಟನಾಗಿ ಬೆಳೆದ ರೀತಿ, ನೀತಿಗಳ ಕುರಿತು ನಿತ್ಯ ಬೆಳಿಗ್ಗೆ 8.45 ಗಂಟೆಗೆ (ಸುಮಾರು 10ರಿಂದ 12 ನಿಮಿಷ) ಕಾರ್ಯಕ್ರಮ ಬಿತ್ತರವಾಗುತ್ತಿದೆ. ಈ ವೇಳೆಯಲ್ಲಿ ರಾಜ್‌ ಸಿನಿಮಾದ ಗೀತೆಗಳೂ ಗುನುಗುತ್ತಿವೆ.

‘ಲೇಖಕ ಅ.ನಾ. ಪ್ರಹ್ಲಾದರಾವ್‌ ಅವರು ಡಾ. ರಾಜ್‌ ಅವರ ಜೀವನ ಚರಿತ್ರೆ ಕುರಿತು ‘ಬಂಗಾರದ ಮನುಷ್ಯ’ ಹಾಗೂ ‘ಪ್ರಾಣ ಪದಕ’ ಬರೆದಿರುವ ಪುಸ್ತಕದಲ್ಲಿನ ಆಯ್ದ ಭಾಗಗಳನ್ನು ಮೂಲ ಲೇಖಕರಿಂದಲೇ ದಿನಕ್ಕೆ 6 ನಿಮಿಷಗಳಿಗೆ (ತಿಂಗಳ ಪೂರ್ತಿ) ಆಗುವಂತೆ ‘ಕಂಟೆಂಟ್‌’ ರೀ ರೈಟ್‌ ಮಾಡಿಸಲಾಗಿದೆ. ರಾಜ್‌ ಅವರ ‘ಬೇಸ್‌ ವಾಯ್ಸ್‌’ನಲ್ಲಿಯೇ ಕಲಾವಿದರಿಂದ ಇದನ್ನು ಓದಿಸುವ ಪ್ರಯತ್ನ ಇಲ್ಲಿ ನಡೆಯುತ್ತಿದೆ.

(2005ರಲ್ಲಿ ಡಾ. ರಾಜ್‌ಕುಮಾರ್‌ ಹುಟ್ಟು ಹಬ್ಬದ ಸಂದರ್ಭ)

ತಿಂಗಳ ಪೂರ್ತಿ ಸೋಮವಾರದಿಂದ ಶುಕ್ರವಾರದವರೆಗೆ ಬೆಳಿಗ್ಗೆ 9.30ರಿಂದ 10 ಗಂಟೆಯವರೆಗೆ ‘ರಾಜ್‌ ಧ್ವನಿ ಚಿತ್ರ ಮಾಲಾ’ ಪ್ರಸಾರ ಆರಂಭವಾಗಿದೆ. ಇದೊಂದು ರೀತಿಯಲ್ಲಿ ‘ಸಿನಿಮಾ ಸೀರಿಯಲ್‌’ ಆಗಿದ್ದು ಹೊಸ ಪ್ರಯೋಗ. ವಾರಕ್ಕೊಂದು ರಾಜ್‌ ಸಿನಿಮಾವನ್ನು ಧಾರಾವಾಹಿಯಂತೆ ಈ ಅವಧಿಯಲ್ಲಿ ಪ್ರಸಾರ ಮಾಡಲಾಗುತ್ತದೆ. ಈಗಾಗಲೇ ಏಪ್ರಿಲ್‌ ಮೊದಲ ವಾರ ‘ಬಬ್ರುವಾಹನ’ ಪ್ರಸಾರವಾಗಿದೆ. ಎರಡನೇ ವಾರ ‘ಸಂಧ್ಯಾರಾಗ’ ಪ್ರಸಾರವಾಗಲಿದೆ. ಮೂರು ಮತ್ತು ನಾಲ್ಕನೇ ವಾರ ಪ್ರಸಾರವಾಗಲಿರುವ ಸಿನಿಮಾಗಳ ಆಯ್ಕೆ ಇನ್ನೂ ಅಂತಿಮವಾಗಿಲ್ಲ ಎನ್ನುತ್ತಾರೆ ಕಾರ್ಯಕ್ರಮ ನಿರ್ವಹಣಾಧಿಕಾರಿ ಎಸ್‌.ಆರ್‌. ಭಟ್‌.

ಈ ಅವಧಿಯಲ್ಲಿ ಮೊದಲ 12ರಿಂದ 15 ನಿಮಿಷ ಸಿನಿಮಾದ ಧ್ವನಿ ಚಿತ್ರ ಪ್ರಸಾರವಾದರೆ, ಉಳಿದ ಅವಧಿಯಲ್ಲಿ ವಿಶ್ಲೇಷಣೆ, ಚರ್ಚೆ ನಡೆಯುತ್ತದೆ. ಇದರಲ್ಲಿ ಆಯಾ ಸಿನಿಮಾದ ನಿರ್ದೇಶಕ, ನಿರ್ಮಾಪಕ, ಚಿತ್ರದಲ್ಲಿ ರಾಜ್‌ ಜತೆ ನಟಿಸಿದ್ದ ಸಹ ಕಲಾವಿದರು, ಸಮಕಾಲೀನ ಕಲಾವಿದರು, ಮೇಕಪ್‌ಮ್ಯಾನ್‌, ಸ್ನೇಹಿತರು ಮತ್ತು ರಾಜ್‌ ಅವರನ್ನು ಹತ್ತಿರದಿಂದ ಬಲ್ಲ ಕಲಾವಿದರಿಂದ ಚರ್ಚೆ ನಡೆಸಲಾಗುತ್ತದೆ. ಸಿನಿಮಾ ಚಿತ್ರೀಕರಣದ ಸಂದರ್ಭದಲ್ಲಿ, ಅದಕ್ಕೂ ಮುನ್ನ ಮತ್ತು ನಂತರ ನಡೆದ ಕೆಲ ವಿಶೇಷ ಪ್ರಸಂಗ, ಘಟನೆಗಳನ್ನು ಕಲಾವಿದರು ಮೆಲುಕು ಹಾಕುವರು.

(ರಾಜ್‌ಕುಮಾರ್‌ ಸಮಾಧಿ, ಪುತ್ಥಳಿ)

‘ಬಬ್ರುವಾಹನದಲ್ಲಿ ನಟಿಸಲ್ಲ ಎಂದಿದ್ದ ರಾಜ್‌’

‘ಬಬ್ರುವಾಹನ ಸಿನಿಮಾದಲ್ಲಿ ನಟಿಸಲು ಡಾ. ರಾಜ್‌ ಕುಮಾರ್‌ ಅವರಿಗೆ ಸುತಾರಾಂ ಇಷ್ಟವಿರಲಿಲ್ಲ. ಖಳನಾಯಕನ ಪಾತ್ರದಲ್ಲಿ ನಟಿಸುವುದಿಲ್ಲ ಎಂದು ರಾಜ್‌ ಹಟ ಹಿಡಿದಿದ್ದರಿಂದ ಅವರನ್ನು ಒಪ್ಪಿಸುವುದು ಕಷ್ಟಕರವಾಗಿತ್ತು. ಇದಕ್ಕಾಗಿ ಹರಸಾಹಸ ಪಡಬೇಕಾಯಿತು’ ಎಂಬ ಮಾಹಿತಿಯನ್ನು ಈ ವೇಳೆಯ ಚರ್ಚೆಯಲ್ಲಿ ಚಿತ್ರದ ನಿರ್ಮಾಪಕ ಕೆ.ಸಿ.ಎನ್‌.ಚಂದ್ರಶೇಖರ್‌ ಹಂಚಿಕೊಂಡಿದ್ದರು. ಇದು ಶ್ರೋತೃಗಳಲ್ಲಿ ಅಚ್ಚರಿ ಮೂಡಿಸಿತ್ತು.

‘ಈ ಸಿನಿಮಾದಲ್ಲಿ ನಟಿಸಲು ಬಲವಂತ ಪಡಿಸಬೇಡಿ. ಬೇಕಾದರೆ ನೀವು ನಿರ್ಮಿಸುವ ಬೇರೆ ಎರಡು ಚಿತ್ರಗಳಲ್ಲಿ ನಟಿಸಲು ಈಗಲೇ ಒಪ್ಪಿಗೆ ನೀಡುತ್ತೇನೆ’ ಎಂದು ರಾಜ್‌ ಹೇಳಿದ್ದನ್ನು ಅವರು ಸ್ಮರಿಸಿದ್ದರು.

‘ಕೊನೆಗೆ ರಾಜ್‌ ಅವರ ಆಪ್ತರು, ಸಮೀಪವರ್ತಿಗಳ ನೆರವಿನಿಂದ ಅವರನ್ನು ಮನವೊಲಿಸಲಾಯಿತು. ಆದರೆ ಚಿತ್ರೀಕರಣದುದ್ದಕ್ಕೂ ರಾಜ್‌ ಅವರು ತೂಕದ ಆಭರಣಗಳನ್ನು ಹಾಕಿಕೊಳ್ಳಬೇಕಾಗಿತ್ತು. ಇದರಿಂದಾಗಿ ಅವರ ಮೈ ಮೇಲೆ ಬೊಬ್ಬೆಗಳು ಬಂದಿದ್ದವು. ಈ ಚಿತ್ರದಲ್ಲಿ ಸುಮಾರು 3000 ಕಲಾವಿದರು ಸೈನಿಕರಾಗಿ ಪಾತ್ರ ನಿರ್ವಹಿಸಿದ್ದರು’ ಎಂಬ ಮಾಹಿತಿಯನ್ನು ಅವರು ಈ ವೇಳೆ ಹಂಚಿಕೊಂಡಿದ್ದರು.

(ರಾಘವೇಂದ್ರ ರಾಜ್‌ಕುಮಾರ್ ಜೊತೆಗೆ ಮೇರುನಟ ಡಾ. ರಾಜ್‌ಕುಮಾರ್)

ಅಪ್ಪನ ಸ್ಮರಣೆ: ಏಪ್ರಿಲ್‌ 12 ಮತ್ತು 24ರಂದು ಬೆಳಿಗ್ಗೆ 8ರಿಂದ 9 ಗಂಟೆಯವರೆಗೆ ರಾಜ್‌ ಅವರ ಪುತ್ರರಾದ ರಾಘವೇಂದ್ರ ರಾಜ್‌ ಕುಮಾರ್‌ ಮತ್ತು ಶಿವರಾಜ್‌ ಕುಮಾರ್‌ ಅವರು ತಮ್ಮ ಅಪ್ಪನನ್ನು ಸ್ಮರಿಸಲಿದ್ದಾರೆ.

ಡಾ. ರಾಜ್‌ ಅವರ ಖಾಸಗಿ ಬದುಕು ಹೇಗಿತ್ತು. ಕುಟುಂಬದೊಂದಿಗೆ ಅವರ ಸ್ಪಂದನೆ ಹೇಗಿತ್ತು. ಅವರಲ್ಲಿ ಎಂತಹ ಸಿಟ್ಟು, ಕೋಪ ಇತ್ತು. ಮಕ್ಕಳೊಂದಿಗೆ, ಪತ್ನಿಯೊಂದಿಗೆ ಅವರು ಹೇಗೆ ನಡೆದುಕೊಳ್ಳುತ್ತಿದ್ದರು. ರಾಜ್‌ ಅವರ ಸರಳ ಜೀವನ ಮತ್ತು ದಿನಚರಿ ಹೇಗಿತ್ತು ಎಂಬುದೆಲ್ಲದರ ಮಾಹಿತಿಯನ್ನು ರಾಜ್‌ ಪುತ್ರರು ಕೇಳುಗರೊಂದಿಗೆ ಹಂಚಿಕೊಳ್ಳಲಿದ್ದಾರೆ ಎಂದು ಕಾರ್ಯಕ್ರಮದ ಮತ್ತೊಬ್ಬ ನಿರ್ವಹಣಾಧಿಕಾರಿ ಟಿ.ವಿ. ವಿದ್ಯಾಶಂಕರ್‌ ತಿಳಿಸಿದರು.

**

ವಿಷ್ಣುವರ್ಧನ್‌ ಸ್ಮರಣೆಗೂ ಯೋಜನೆ

ಸಮೂಹ ಮಾಧ್ಯಮವೊಂದು ತಿಂಗಳಪೂರ್ತಿ ನಟನೊಬ್ಬನನ್ನು ಸ್ಮರಿಸುವ ಕಾರ್ಯ ಮಾಡುತ್ತಿರುವುದು ಇದೇ ಮೊದಲು. ರಾಜ್‌ ಅವರನ್ನು ಈ ರೀತಿ ವಿಶೇಷವಾಗಿ ಸ್ಮರಿಸುವ ಪ್ರಯತ್ನ ಕೈಗೊಂಡಿರುವುದಕ್ಕೆ ಕೇಳುಗರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದೇ ರೀತಿಯಲ್ಲಿ ಮೇರು ನಟ ವಿಷ್ಣುವರ್ಧನ್‌ ಅವರ ಹುಟ್ಟು ಹಬ್ಬದ (ಸೆಪ್ಟೆಂಬರ್‌ 12) ಸಂದರ್ಭದಲ್ಲಿ ಮಾಸಿಕ ಅಥವಾ ಪಾಕ್ಷಿಕ ಕಾರ್ಯಕ್ರಮ ಪ್ರಸಾರ ನಡೆಸಲು ಚಿಂತಿಸಲಾಗಿದೆ ಎನ್ನುತ್ತಾರೆ ಎಸ್‌.ಆರ್‌.ಭಟ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT