ಕಾರವಾರ: ಜಾನಪದ ಅಕಾಡೆಮಿಯ ಗೌರವ ಪ್ರಶಸ್ತಿ ಪ್ರಕಟವಾಗಿದ್ದು, ಭಟ್ಕಳ ತಾಲ್ಲೂಕಿನ ಬೆದ್ರಿಕೇರಿಯ ಕೊಪ್ಪದ ಮಕ್ಕಿ ನಿವಾಸಿ, ಜಾನಪದ ಗಾಯಕಿ ಶಾರದಾ ಮಹಾದೇವ ಮೊಗೇರ (78) ಆಯ್ಕೆಯಾಗಿದ್ದಾರೆ.
ಜೋಗುಳ ಪದಗಳು, ಭತ್ತ ನಾಟಿ ಮಾಡುವಾಗ, ಭತ್ತ ಕುಟ್ಟುವಾಗ, ಬೀಸುವ ಪದಗಳು, ಮದುವೆ, ಸೋಬಾನೆ ಪದಗಳು, ದೋಣಿ ಪದಗಳಂಥ ಸಾವಿರಾರು ಹಾಡುಗಳನ್ನು ಅವರು ಹಾಡಬಲ್ಲರು. ಅಲ್ಲದೇ ಪುರಾಣ ಕಥನಗಳು, ಕಡಲ ಪದಗಳು, ಕಾಯಕ ಪದಗಳನ್ನೂ ಬಲ್ಲರು.
ಐದು ದಶಕಗಳಿಗೂ ಅಧಿಕ ಕಾಲದಿಂದ ಜಾನಪದ ಸೇವೆಯಲ್ಲಿ ಅವರು ನಿರತರಾಗಿದ್ದಾರೆ. ತಮ್ಮ ಸಮುದಾಯದ ಸಂಸ್ಕೃತಿ, ಜಾನಪದ ಕಲೆಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯದಲ್ಲೂ ಅವರು ತೊಡಗಿದ್ದಾರೆ. ಜಿಲ್ಲೆ ವಿವಿಧೆಡೆ ನಡೆದ ಕಾರ್ಯಕ್ರಮಗಳಲ್ಲಿ ಅವರು ತಮ್ಮ ಜಾನಪದ ಜ್ಞಾನವನ್ನು ತೆರೆದಿಟ್ಟಿದ್ದಾರೆ. ಪ್ರಸ್ತುತ ಇಬ್ಬರು ಪುತ್ರರೊಂದಿಗೆ ನೆಲೆಸಿದ್ದು, ಕೃಷಿ ಕಾರ್ಯಗಳಲ್ಲಿ ನಿರತರಾಗಿದ್ದಾರೆ.
ಗೌರವ ಪ್ರಶಸ್ತಿಯು ₹ 25 ಸಾವಿರ ನಗದು ಹಾಗೂ ಸನ್ಮಾನ ಒಳಗೊಂಡಿದೆ.