ಶಿರಸಿ: ವಿದ್ಯುತ್ ಖಾಸಗೀಕರಣ ಕಾನೂನು ಜಾರಿಗೊಳಿಸಿ ಕೃಷಿ ಪಂಪ್ಸೆಟ್ಗೂ ಮುಂಗಡ ಪಾವತಿ (ಪ್ರಿಪೇಯ್ಡ್) ಜಾರಿಗೊಳಿಸುವ ಕೇಂದ್ರ ಮತ್ತು ರಾಜ್ಯ ಸರ್ಕಾರದ ನೀತಿ ಖಂಡಿಸಿ ಭೂಮಿ ಹಕ್ಕು ಹೋರಾಟಗಾರರು ತಾಲ್ಲೂಕಿನ ಕಂಡ್ರಾಜಿಯಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
ಗ್ರಾಮದ ರೈತರೊಬ್ಬರ ಕೃಷಿ ಪಂಪ್ಸೆಟ್ ಮನೆ ಪಕ್ಕ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರ ಭಾವಚಿತ್ರ ಪ್ರದರ್ಶಿಸಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.
ಭೂಮಿ ಹಕ್ಕು ಹೋರಾಟಗಾರರ ಪ್ರಮುಖ ರವೀಂದ್ರ ನಾಯ್ಕ ಮಾತನಾಡಿ, ‘ರಾಜ್ಯದ ರೈತರ ಪಂಪ್ಸೆಟ್ಗಳಿಗೆ ಉಚಿತ ವಿದ್ಯುತ್ ನೀಡಿದ್ದ ಅಂದಿನ ಮುಖ್ಯಮಂತ್ರಿ ಬಂಗಾರಪ್ಪ ಮಾದರಿ ಕೆಲಸ ಮಾಡಿದ್ದರು. ಆದರೆ ಈಗಿನ ಕೇಂದ್ರ ಮತ್ತು ರಾಜ್ಯ ಸರ್ಕಾರ ರೈತ ವಿರೋಧಿಯಾಗಿ ವರ್ತಿಸುತ್ತಿವೆ’ ಎಂದು ಆರೋಪಿಸಿದರು.
‘ತಿದ್ದುಪಡಿ ಮಸೂದೆ ರೈತರು ಮತ್ತು ಆರ್ಥಿಕವಾಗಿ ಹಿಂದುಳಿದವರಿಗೆ ತುಂಬಲಾರದಷ್ಟು ನಷ್ಟ ಉಂಟುಮಾಡುವುದು ನಿಶ್ಚಿತ. ಅತಿವೃಷ್ಟಿ ಮತ್ತು ಬರಗಾಲದಿಂದ ಕಂಗೆಟ್ಟಿರುವ ರೈತರಿಗೆ ಈ ಮಸೂದೆ ಗಾಯದ ಮೇಲೆ ಬರೆ ಎಳೆಯಲಿದೆ’ ಎಂದರು.
ತಕ್ಷಣ ಸರ್ಕಾರ ವಿದ್ಯುತ್ ತಿದ್ದುಪಡಿ ಮಸೂದೆ ಹಿಂದಕ್ಕೆ ಪಡೆಯಬೇಕೆಂದು ಪ್ರಗತಿ ಪರ ರೈತ ವೆಂಕಟೇಶ ಬೈಂದೂರ್ ಬಿಸಲಕೊಪ್ಪ ಒತ್ತಾಯಿಸಿದರು.
ಬಂಕನಾಳ ಗ್ರಾಮ ಪಂಚಾಯ್ತಿ ಅಧ್ಯಕ್ಷ ಬೆಲ್ಲ ಗೌಡ, ಎಂ.ಆರ್.ನಾಯ್ಕ ಕಂಡ್ರಾಜಿ, ಮೋಹನ ನಾಯ್ಕ, ನೆಹರು ನಾಯ್ಕ ಇದ್ದರು.