ಶಿರಸಿ ತಾಲ್ಲೂಕು ಶಿಂಗನಮನೆಯ ಮಹಾದೇವಿ ಹೆಗಡೆ ಅವರಿಗೆ ಸದಾ ಹೊಸತನ್ನು ಕಲಿಯುವ ಮತ್ತು ಅದನ್ನು ಪ್ರಾಯೋಗಿಕವಾಗಿ ಅನುಷ್ಠಾನಕ್ಕೆ ತರುವ ಹಂಬಲ. ಹೊಸ ಅಡುಗೆ, ಹೊಲಿಗೆ ಇವುಗಳನ್ನು ನೋಡಿ ಬಂದು, ಮನೆಯಲ್ಲಿ ಪ್ರಯೋಗ ಮಾಡುವ ಅವರಿಗೆ ಸಣ್ಣ ಉದ್ಯಮ ಆರಂಭಿಸುವ ಯೋಚನೆ ಬಂತು. ಅಡುಗೆಮನೆ ಸಾಂಬಾರು ಬಟ್ಟಲಿನಲ್ಲಿರುವ ಸಾಮಗ್ರಿಗಳನ್ನು ಬಳಸಿ ಸಾಂಬಾರು ಪುಡಿ ತಯಾರಿಸಿ, ಪೇಟೆಗೆ ಬರುವ ಪತಿಯ ಬಳಿ ಟಿಎಸ್ಎಸ್ ಸುಪರ್ ಮಾರ್ಕೆಟ್ಗೆ ಕಳುಹಿಸಿದರು. ಅಲ್ಲಿ ಮಾರಾಟಕ್ಕಿಟ್ಟಿದ್ದ ಸಾಂಬಾರು ಪುಡಿ ಪ್ಯಾಕೆಟ್ ಎರಡೇ ದಿನಗಳಲ್ಲಿ ಖಾಲಿಯಾಯಿತು ಜೊತೆಗೆ ಗ್ರಾಹಕರಿಂದ ಬೇಡಿಕೆಯೂ ಬಂತು.