ಯಲ್ಲಾಪುರ: ನಾಡಿನ ಗಂಡುಕಲೆ ಎನಿಸಿರುವ ಯಕ್ಷಗಾನ, ವ್ಯಕ್ತಿಯ ಮನಸ್ಸಿನ ವಿಕಾಸದೊಂದಿಗೆ, ಸ್ವಾದಾಭಿರುಚಿಗೆ ತಕ್ಕಂತೆ ಮನರಂಜನೆಯನ್ನೂ ನೀಡುವ ಶಕ್ತಿಯುತ ಕಲೆಯಾಗಿದೆ ಎಂದು ಶಾರದಾಂಬಾ ದೇವಸ್ಥಾನದ ಅಧ್ಯಕ್ಷ ಡಿ. ಶಂಕರ ಭಟ್ಟ ಹೇಳಿದರು.
ಸಂಕಲ್ಪ ಸಂಸ್ಥೆಯ ಆಶ್ರಯದಲ್ಲಿ ಪಟ್ಟಣದ ನಿಸರ್ಗಮನೆಯಲ್ಲಿ ಭಾನುವಾರ ಕಲಾ ಭವನ ಉದ್ಘಾಟನೆ ಹಾಗೂ ಹೊಸ್ತೋಟ ಮಂಜುನಾಥ ಭಾಗವತರ ಸಂಸ್ಮರಣೆ ಪ್ರಯುಕ್ತ ಏರ್ಪಡಿಸಿದ್ದ ಯಕ್ಷಗಾನೋತ್ಸವ-ಹಿಮ್ಮೇಳ ಗಾನ ಹಬ್ಬವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕಲೆ ಹಾಗೂ ಕಲಾವಿದರನ್ನು ಪ್ರೋತ್ಸಾಹಿಸುವ ಮೂಲಕ ಕಲಾ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುವ ಕಾರ್ಯವನ್ನು ಸಂಕಲ್ಪ ಮಾಡುತ್ತಿದೆ ಎಂದರು.
ಸಂಕಲ್ಪ ಅಧ್ಯಕ್ಷ ಪ್ರಮೋದ ಹೆಗಡೆ ಮಾತನಾಡಿ, ‘ಹೊಸ್ತೋಟ ಭಾಗವತರು ಯಕ್ಷಗಾನದ ದೊಡ್ಡ ಆಸ್ತಿಯಾಗಿದ್ದರು. ಅವರ ರಚನೆಯ ಪ್ರಸಂಗ ಯಕ್ಷಗಾನ ಸಾಹಿತ್ಯಕ್ಕೆ ಅಮೂಲ್ಯ ಕೊಡುಗೆಯಾಗಿದೆ. ಅಂಧರಿಗೂ ಯಕ್ಷಗಾನ ಕಲಿಸುವ ಮೂಲಕ ದಾಖಲೆ ನಿರ್ಮಿಸಿದ್ದರು. ಸಾವಿರಾರು ಶಿಷ್ಯರನ್ನು ಹೊಂದಿದ್ದ ಅವರಿಗೆ ಕಲೆಯನ್ನು ಜೀವಂತವಾಗಿಡುವ ಮೂಲಕ ಗೌರವ ಸಲ್ಲಿಸಬೇಕು’ ಎಂದರು.
ಹಿಮ್ಮೇಳ ಹಬ್ಬವನ್ನು ಹೊಸ್ತೋಟ ಭಾಗವತರ ಸಂಸ್ಮರಣೆಗಾಗಿಯೇ ಮೀಸಲಿಟ್ಟು ಅವರನ್ನು ಸ್ಮರಿಸಲಾಯಿತು. ತೇಜಸ್ ಮತ್ತು ಶ್ರೀಶ ಅವರ ಯಕ್ಷನೃತ್ಯದ ದೇವಸ್ತುತಿಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ನಾಗರಾಜ ಹೆಗಡೆ ನಿರೂಪಿಸಿದರು. ಸಭಾ ಕಾರ್ಯಕ್ರಮದ ನಂತರ ವಿವಿಧ ಕಲಾವಿದರಿಂದ ಯಕ್ಷಗಾನೋತ್ಸವದ ಹಿಮ್ಮೇಳ ಗಾನ ಪ್ರೇಕ್ಷಕರ ಮನಸೂರೆಗೊಳ್ಳುವಲ್ಲಿ ಯಶಸ್ವಿಯಾಯಿತು.