ಶಿರಸಿ: ಇಲ್ಲಿನ ನಗರಸಭೆಯ ಅಧಿಕಾರವನ್ನು ಬಿಜೆಪಿ ತನ್ನ ತೆಕ್ಕೆಗೆ ಪಡೆಯಿತು. ಅಧ್ಯಕ್ಷರಾಗಿ 26ನೇ ವಾರ್ಡಿನ ಸದಸ್ಯ ಬಿಜೆಪಿಯ ಗಣಪತಿ ನಾಯ್ಕ, ಉಪಾಧ್ಯಕ್ಷರಾಗಿ 15ನೇ ವಾರ್ಡಿನ ಸದಸ್ಯೆ, ಅದೇ ಪಕ್ಷದ ವೀಣಾ ಶೆಟ್ಟಿ ಗೆಲುವು ಸಾಧಿಸಿದರು.
ಅಧ್ಯಕ್ಷ ಹುದ್ದೆಗೆ ಕಾಂಗ್ರೆಸ್ಸಿನ ಪ್ರದೀಪ ಶೆಟ್ಟಿ, ಉಪಾಧ್ಯಕ್ಷ ಹುದ್ದೆಗೆ ಶಮೀನಾ ಬಾನು ನಾಮಪತ್ರ ಸಲ್ಲಿಸಿದ್ದರು. ನಗರಸಭೆಯ ಸಭಾಭವನದಲ್ಲಿ ಶನಿವಾರ ಚುನಾವಣಾ ಪ್ರಕ್ರಿಯೆ ನಡೆಯಿತು.
31 ಸದಸ್ಯರ ಪೈಕಿ 28 ಸದಸ್ಯರು ಮತ ಚಲಾಯಿಸಿದರು. ಮೂವರು ಪಕ್ಷೇತರ ಸದಸ್ಯರು ತಟಸ್ಥರಾಗಿ ಉಳಿದರು.
ಗಣಪತಿ ನಾಯ್ಕ 18 ಮತಗಳನ್ನು ಪಡೆದರು. ಪ್ರದೀಪ ಶೆಟ್ಟಿ 10 ಮತ ಪಡೆದರು. ವೀಣಾ ಶೆಟ್ಟಿ18 ಮತಗಳನ್ನು ಪಡೆದರೆ, ಶಮೀನಾ ಬಾನು 10ಮತಗಳನ್ನು ಪಡೆದರು.
ಬಿಜೆಪಿಯ 17, ಕಾಂಗ್ರೆಸ್ಸಿನ 9, ಪಕ್ಷೇತರ 4 ಹಾಗೂ ಜೆಡಿಎಸ್ ನ ಒಬ್ಬ ಸದಸ್ಯರಿದ್ದಾರೆ. ಚುನಾವಣಾಧಿಕಾರಿಯಾಗಿ ಶಿರಸಿ ಉಪವಿಭಾಗಾಧಿಕಾರಿ ಆಕೃತಿ ಬನ್ಸಾಲ್ ಚುನಾವಣಾ ಪ್ರಕ್ರಿಯೆ ನಡೆಸಿದರು.ಕಳೆದ ಅವಧಿಯಲ್ಲಿ ಕಾಂಗ್ರೆಸ್ ಶಿರಸಿ ನಗರಸಭೆ ಅಧಿಕಾರ ಪಡೆದಿತ್ತು.
ಕೇಸರಿ ಪೇಟಾದಲ್ಲಿ ಸದಸ್ಯರು: ನಗರಸಭೆಯಲ್ಲಿ ಸ್ಪಷ್ಟ ಬಹುಮತ ಹೊಂದಿದ್ದ ಬಿಜೆಪಿ ಅಧಿಕಾರಕ್ಕೆ ಏರುವ ವಿಶ್ವಾಸದಲ್ಲಿತ್ತು. ಹೀಗಾಗಿ ಎಲ್ಲ ಸದಸ್ಯರು ಸಾಂಪ್ರದಾಯಿಕ ಕೇಸರಿ ಪೇಟಾ ತೊಟ್ಟು ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.