ಶಿರಸಿ: ‘ಪ್ರತಿಯೊಬ್ಬರೂ ಮತದಾರರ ಗುರುತಿನ ಚೀಟಿ ಜತೆಗೆ ಆಧಾರ್ ಜೋಡಣೆ ಮಾಡಿಕೊಳ್ಳಬೇಕು. ಈ ಬಗ್ಗೆ ಕ್ರಮವಹಿಸಲು ಮತಗಟ್ಟೆ ಅಧಿಕಾರಿಗಳ ನೇತೃತ್ವದಲ್ಲಿ ಸಮಿತಿ ರಚಿಸಲಾಗುವುದು’ ಎಂದು ತಹಶೀಲ್ದಾರ್ ಶ್ರೀಧರ ಮುಂದಲಮನಿ ಹೇಳಿದರು.
ಇಲ್ಲಿನ ಮಿನಿ ವಿಧಾನಸೌಧದಲ್ಲಿ ಸೋಮವಾರ ಆಧಾರ್ ಜೋಡಣೆ ಶೇ 50ಕ್ಕಿಂತ ಕಡಿಮೆ ಆಗಿರುವ ನಗರ ವ್ಯಾಪ್ತಿಯ ಮತಗಟ್ಟೆ ಅಧಿಕಾರಿಗಳ ಸಭೆ ನಡೆಸಿದ ಅವರು, ‘ಆಧಾರ್ ಜೋಡಣೆ ಕುರಿತಂತೆ ಸಾರ್ವಜನಿಕರಿಗೆ ಈಗಾಗಲೆ ಜಾಗೃತಿ ಮೂಡಿಸಲಾಗಿದೆ. ಮತಗಟ್ಟೆ ಅಧಿಕಾರಿಗಳು ಸ್ವಯಂ ಆಸಕ್ತಿಯಿಂದ ಪರಿಣಾಮಕಾರಿ ಕೆಲಸ ಮಾಡಿದರೆ ಪ್ರತಿಶತ ಸಾಧನೆ ಮಾಡಲು ಸಾಧ್ಯವಿದೆ’ ಎಂದರು.
ನಗರ ವ್ಯಾಪ್ತಿಯಲ್ಲಿ ಜನರು ಆಧಾರ್ ಜೋಡಣೆಗೆ ನಿರಾಸಕ್ತಿ ತೋರುತ್ತಿರುವ ಕುರಿತು ಮತಗಟ್ಟೆ ಅಧಿಕಾರಿಗಳು ಸಮಸ್ಯೆ ಗಮನಕ್ಕೆ ತಂದರು.
‘ಆಯಾ ವಾರ್ಡ್ ವ್ಯಾಪ್ತಿಯಲ್ಲಿ ಮತಗಟ್ಟೆ ಅಧಿಕಾರಿ, ನಗರಸಭೆ ನೋಡಲ್ ಅಧಿಕಾರಿ, ಆಶಾ ಕಾರ್ಯಕರ್ತೆ, ಅಂಗನವಾಡಿ ಕಾರ್ಯಕರ್ತೆಯರ ತಂಡ ರಚಿಸಲಾಗುವುದು. ಆಧಾರ್ ಜೋಡಣೆ ಪ್ರಕ್ರಿಯೆ ಕುರಿತು ಈ ಸಮಿತಿ ಸ್ಥಳೀಯ ನಗರಸಭೆ ಸದಸ್ಯರ ಗಮನಕ್ಕೆ ತಂದು ಕೆಲಸ ಮಾಡಬೇಕು’ ಎಂದರು.