ಹುಬ್ಬಳ್ಳಿ: ಜಾಮೀನು ಸಿಗದೇ ಹತಾಶಗೊಂಡ ವಿಚಾರಣಾಧೀನ ಕೈದಿಯೊಬ್ಬ, ಇಲ್ಲಿನ ಜೆಎಂಎಫ್ಸಿ ಎರಡನೇ ನ್ಯಾಯಾಲಯದಲ್ಲಿ ನ್ಯಾಯಾಧೀಶ ವಿಶ್ವನಾಥ ಮುಗತಿ ಅವರತ್ತ ಶನಿವಾರ ಚಪ್ಪಲಿ ಎಸೆದಿದ್ದಾನೆ.
ಹೊಡೆದಾಟ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಮೂರು ತಿಂಗಳಿಂದ ಜೈಲಿನಲ್ಲಿ ಇರುವ ಶರೀಫಸಾಬ್ ಕಂಪ್ಲಿ ಎಂಬಾತ, ತನಗೆ ಜಾಮೀನು ನೀಡದೇ ಅನಗತ್ಯವಾಗಿ ವಿಳಂಬ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಈ ಕೃತ್ಯ ಎಸಗಿದ್ದಾನೆ ಎಂದು ಪ್ರತ್ಯಕ್ಷದರ್ಶಿ ವಕೀಲರು ‘ಪ್ರಜಾವಾಣಿ’ಗೆ ತಿಳಿಸಿದರು.
ಚಪ್ಪಲಿಯು ನ್ಯಾಯಾಧೀಶರ ಸಮೀಪದಲ್ಲೇ ತೂರಿ ಹೋಯಿತು. ಸ್ಥಳದಲ್ಲಿದ್ದ ಪೊಲೀಸರು ವಿಚಾರಣಾಧೀನ ಕೈದಿಯನ್ನು ತಕ್ಷಣ ಹೊರಕ್ಕೆ ಕರೆದೊಯ್ದರು ಎಂದು ವಕೀಲರು ವಿವರಿಸಿದರು.