ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಎಂ ವರ್ಚಸ್ಸಿಗೆ ಜೆಡಿಎಸ್ ಸವಾಲ್

Last Updated 4 ಮೇ 2018, 19:30 IST
ಅಕ್ಷರ ಗಾತ್ರ

ಮುಖ್ಯಮಂತ್ರಿ ಸಿದ್ದರಾಮಯ್ಯ ತವರು ಜಿಲ್ಲೆ ಮೈಸೂರಿನಲ್ಲಿ ತಮ್ಮ ವರ್ಚಸ್ಸನ್ನು ಪಣಕ್ಕೆ ಇಟ್ಟಿದ್ದಾರೆ. ಏಕೆಂದರೆ, ಇಲ್ಲಿ ಕಾಂಗ್ರೆಸ್‌ಗೆ ಜೆಡಿಎಸ್ ಪ್ರಬಲ ಪೈಪೋಟಿ ನೀಡುತ್ತಿದೆ.

ಚಾಮುಂಡೇಶ್ವರಿ ಕ್ಷೇತ್ರದಿಂದ ಸಿದ್ದರಾಮಯ್ಯ ಕಣಕ್ಕೆ ಇಳಿದಿದ್ದು, ಇಲ್ಲಿಯೂ ಜೆಡಿಎಸ್‌ನ ಜಿ.ಟಿ.ದೇವೇಗೌಡ ಸಮಬಲದ ಪೈಪೋಟಿ ನೀಡುತ್ತಿದ್ದಾರೆ. ಇದೇ ಕಾರಣಕ್ಕಾಗಿ ಮುಖ್ಯಮಂತ್ರಿ ಬಾದಾಮಿ ಕ್ಷೇತ್ರದಿಂದಲ್ಲೂ ಸ್ಪರ್ಧಿಸಿದ್ದಾರೆ ಎನ್ನುವ ಮಾತಿದೆ. ಕಾಂಗ್ರೆಸ್‌– ಜೆಡಿಎಸ್‌ ಸೆಣಸಾಟದ ತೀವ್ರತೆಗೆ ಕಮಲ ಮುದುಡಿದಂತೆ ಕಾಣುತ್ತಿದೆ.

ಜಿಲ್ಲೆಯಲ್ಲಿ 11 ಕ್ಷೇತ್ರಗಳಿದ್ದು, 9ರಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್ ಹಣಾಹಣಿ ನಡೆಸಿವೆ. ಬಹುತೇಕ ಕ್ಷೇತ್ರಗಳಲ್ಲಿ ಬಿಜೆಪಿ ಸಮರ್ಥ ಅಭ್ಯರ್ಥಿಗಳನ್ನು ಕಣಕ್ಕಿಳಿಸಿಲ್ಲ. ಸಾಕಷ್ಟು ಕಡೆಗಳಲ್ಲಿ, ಕ್ಷೇತ್ರದ ಜನರಿಗೆ ಪರಿಚಯವೇ ಇಲ್ಲದವರನ್ನು ಕರೆತಂದು ಟಿಕೆಟ್ ನೀಡಲಾಗಿದೆ. ಜೆಡಿಎಸ್– ಬಿಜೆಪಿ ನಡುವಿನ ಒಳ ಒಪ್ಪಂದದ ಕುರುಹು ಇದು ಎಂಬ ಆರೋಪ ಕೇಳಿಬಂದಿದೆ.

ಪೈಪೋಟಿ ನೀಡಬಹುದಾದ ಕ್ಷೇತ್ರಗಳಲ್ಲೂ ಬಿಜೆಪಿ ಆಂತರಿಕ ಭಿನ್ನಮತದಿಂದ ನಲುಗಿದೆ. ಪ್ರಮುಖ ನಾಯಕರು ಬಂದಾಗ ಮುಖಂಡರು ಪ್ರಚಾರದಲ್ಲಿ ಕಾಣಿಸಿಕೊಂಡು ನಂತರ ಮರೆಯಾಗುತ್ತಾರೆ. ಕಳೆದ ಚುನಾವಣೆಯಲ್ಲಿ ಶೂನ್ಯ ಸಾಧನೆ ಮಾಡಿದ್ದ ಪಕ್ಷ, ಈ ಬಾರಿ ಖಾತೆ ತೆರೆಯುವ ತವಕದಲ್ಲಿದೆ.

ದಲಿತ ಸಮುದಾಯದ ಹಿರಿಯ ನಾಯಕ ವಿ.ಶ್ರೀನಿವಾಸ ಪ್ರಸಾದ್, ಈ ಭಾಗದ ಲಿಂಗಾಯತರ ಪ್ರಮುಖ ನಾಯಕರಾಗಿದ್ದ ಎಚ್.ಎಸ್.ಮಹದೇವ ಪ್ರಸಾದ್ ಪಕ್ಷದ ಮತಬುಟ್ಟಿ ತುಂಬಿಸಲು ನೆರವಾಗಿದ್ದರು. ಜತೆಗೆ ಕುರುಬ ಸಮು
ದಾಯದ ಅಡಗೂರು ಎಚ್.ವಿಶ್ವನಾಥ್ ಕೈಜೋಡಿಸಿದ್ದರು. ಎಲ್ಲಾ ನಾಯಕರು ಒಟ್ಟಾಗಿ ಒಬಿಸಿ ಮತಗಳನ್ನು ಕ್ರೋಡೀಕರಿಸಿದ್ದು 8 ಸ್ಥಾನ ಗೆಲ್ಲುವಂತೆ ಮಾಡಿತ್ತು.

ಕಳೆದ ಬಾರಿ ವೋಟು ತಂದುಕೊಟ್ಟ ನಾಯಕರು ಈಗ ಸಿದ್ದರಾಮಯ್ಯ ಜತೆಗಿಲ್ಲ. ಮಹದೇವ ಪ್ರಸಾದ್ ನಿಧನರಾಗಿದ್ದು, ಶ್ರೀನಿವಾಸ ಪ್ರಸಾದ್, ವಿಶ್ವನಾಥ್ ಎದುರಾಳಿಗಳಾಗಿ ತೊಡೆ ತಟ್ಟಿದ್ದಾರೆ. ಜಿಲ್ಲೆಯ ಮಟ್ಟಿಗೆ ಸಿದ್ದರಾಮಯ್ಯ ಏಕಾಂಗಿಯಾಗಿ ಹೋರಾಟ ನಡೆಸಿ, ತಮ್ಮವರನ್ನು ಗೆಲ್ಲಿಸಿಕೊಳ್ಳಬೇಕಿದೆ. ಹಿಂದೆ ಗೆದ್ದಿದ್ದ ಸ್ಥಾನಗಳನ್ನು ಉಳಿಸಿಕೊಳ್ಳುವುದು ದೊಡ್ಡ ಸವಾಲಾಗಿದೆ.

ದೇವರಾಜ ಅರಸು ಅವರನ್ನು ಗುರುವಾಗಿ ಸ್ವೀಕರಿಸಿದ್ದ ಎಚ್.ವಿಶ್ವನಾಥ್, ಸಿದ್ದರಾಮಯ್ಯ ಅವರಲ್ಲಿ ಅರಸು ಅವರನ್ನು ಕಂಡಿದ್ದರು. ಆ ಕಾರಣಕ್ಕೆ ಕಾಂಗ್ರೆಸ್‌ಗೂ ಅವರನ್ನು ಕರೆತರುವಲ್ಲಿ ಯಶಸ್ವಿಯಾಗಿದ್ದರು. ಅರಸು ಅವರಂತೆ ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯುತ್ತಿಲ್ಲ ಎಂದು ಸಿಟ್ಟಾಗಿ ಅವರೇ ಪಕ್ಷ ಬಿಟ್ಟಿದ್ದು ಇತಿಹಾಸ. ಜೆಡಿಎಸ್ ಅನ್ನು ಟೀಕಿಸಿ, ಆ ಪಕ್ಷದಿಂದ ಸಿದ್ದರಾಮಯ್ಯ ಹೊರಬರುವಂತೆ ಮಾಡಿದ ವಿಶ್ವನಾಥ್, ಈಗ ಅದೇ ಪಕ್ಷದಿಂದ ಅರಸು ಕರ್ಮಭೂಮಿ ಹುಣಸೂರು ಕ್ಷೇತ್ರದಲ್ಲಿ ಗುಟುರು ಹಾಕಿದ್ದಾರೆ.

ಶ್ರೀನಿವಾಸ ಪ್ರಸಾದ್ ಪಕ್ಷ ತೊರೆದ ನಂತರ, ಸಚಿವ ಎಚ್.ಸಿ.ಮಹದೇವಪ್ಪ ಅವರ ಮೂಲಕ ದಲಿತರ ಮತಗಳನ್ನು ಸೆಳೆಯುವ ಪ್ರಯತ್ನದಲ್ಲಿ ಕಾಂಗ್ರೆಸ್ ತೊಡಗಿದೆ. ಆದರೆ ಮಹದೇವಪ್ಪ ಅವರಿಗೆ ತಿ.ನರಸೀಪುರದಲ್ಲಿ ಜೆಡಿಎಸ್‌ನಿಂದ ತೀವ್ರ ಪೈಪೋಟಿ ಎದುರಾಗಿದೆ. ಹಾಗಾಗಿ, ಪಕ್ಕದ ಕ್ಷೇತ್ರದಲ್ಲೇ ಸ್ಪರ್ಧಿಸಿರುವ ಸಿದ್ದರಾಮಯ್ಯ, ವರುಣಾದಿಂದ ಕಣಕ್ಕಿಳಿದಿರುವ ಡಾ. ಯತೀಂದ್ರ ಪರ ಪ್ರಚಾರ ಮಾಡಲೂ ಅವರಿಗೆ ಸಾಧ್ಯವಾಗುತ್ತಿಲ್ಲ. ಕಳೆದ ವಿಧಾನಸಭಾ ಚುನಾವಣೆಗೆ ಹೋಲಿಸಿದರೆ ಜೆಡಿಎಸ್ ಸ್ಥಿತಿ ಸುಧಾರಿಸಿದೆ. ಕೃಷ್ಣರಾಜ, ನಂಜನಗೂಡು ಕ್ಷೇತ್ರ ಹೊರತುಪಡಿಸಿ ಉಳಿದೆಡೆ ಕಾಂಗ್ರೆಸ್‌ಗೆ ಪ್ರಬಲ ಪೈಪೋಟಿ ನೀಡುತ್ತಿದೆ. ಮೂವರು ಶಾಸಕರನ್ನು ಹೊಂದಿರುವ ಜೆಡಿಎಸ್ ತನ್ನ ಸಂಖ್ಯೆ ಹೆಚ್ಚಿಸಿಕೊಳ್ಳುವ ಪ್ರಯತ್ನ ಮುಂದುವರಿಸಿದೆ.

ಕಾಂಗ್ರೆಸ್ ಗೆಲುವಿನ ಸಂಖ್ಯೆಯನ್ನು ತಗ್ಗಿಸಿ ಸಿದ್ದರಾಮಯ್ಯ ಅವರನ್ನು ತವರು ಜಿಲ್ಲೆಯಲ್ಲಿ ಮಣಿಸುವ ತಂತ್ರಗಾರಿಕೆ ಹೆಣೆಯುವಲ್ಲಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ಎಚ್.ಡಿ.ಕುಮಾಸ್ವಾಮಿ ನಿರತರಾಗಿದ್ದಾರೆ. ಶಾಸಕರ ಸಂಖ್ಯೆ ಹೆಚ್ಚಿಸಿಕೊಂಡಷ್ಟೂ ಮುಖ್ಯಮಂತ್ರಿ ಕುರ್ಚಿಗೆ ಕುಮಾರಸ್ವಾಮಿ ಸಮೀಪವಾಗುತ್ತಾರೆ. ಅದಕ್ಕಾಗಿ ಈ ಎಲ್ಲ ಪ್ರಯತ್ನಗಳು ಬಿರುಸಿನಿಂದ ನಡೆದಿವೆ ಎನ್ನುತ್ತಾರೆ ಜೆಡಿಎಸ್ ಮುಖಂಡರು.

ಜೆಡಿಎಸ್‌, ಇತರೆಡೆಗಿಂತ ಮೈಸೂರು ಭಾಗದಲ್ಲಿ ಶ್ರಮ ಹಾಕಿದಷ್ಟೂ ಹೆಚ್ಚು ಫಲ ಸಿಗುತ್ತದೆ. ಇಲ್ಲಿ ಕಾಂಗ್ರೆಸ್ ಶಕ್ತಿ ಕುಂದಿದರೆ, ಅದರ ಲಾಭ ಬಿಜೆಪಿಗಿಂತ ಜೆಡಿಎಸ್‌ಗೆ ಆಗುತ್ತದೆ. ಬಿಜೆಪಿ ಸಹ ಒಬ್ಬ ಶತ್ರುವನ್ನು ಮತ್ತೊಬ್ಬ ಶತ್ರುವಿನ ಮೂಲಕ ಮಣಿಸುವ ಪ್ರಯತ್ನದಲ್ಲಿ ತೊಡಗಿದೆ. ಇವೆಲ್ಲವುಗಳಲ್ಲಿ ಯಾವ ತಂತ್ರಗಾರಿಕೆ ಫಲಿಸಲಿದೆ ಎಂಬುದನ್ನು ಕಾಯ್ದು ನೋಡಬೇಕಾಗಿದೆ.

ಅಪ್ಪ– ಮಗ ಸ್ಪರ್ಧೆ

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಯಾರು ಗೆಲ್ಲುತ್ತಾರೆ ಎನ್ನುವ ಮಾತಿನಿಂದಲೇ ಸಾರ್ವಜನಿಕ ಸ್ಥಳಗಳಲ್ಲಿ ಚುನಾವಣೆ ಚರ್ಚೆ ಆರಂಭವಾಗುತ್ತದೆ.

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ದಲಿತರೊಬ್ಬರು ಮುಖ್ಯಮಂತ್ರಿ ಆಗುವ ಅವಕಾಶವನ್ನು ಸಿದ್ದರಾಮಯ್ಯ ಕಿತ್ತುಕೊಳ್ಳುತ್ತಿದ್ದಾರೆ ಎಂಬ ವಿಚಾರವನ್ನು ದಲಿತರಿಗೆ ವ್ಯವಸ್ಥಿತವಾಗಿ ತಲುಪಿಸುವ ಕೆಲಸ ನಡೆದಿದೆ. ಇದಕ್ಕೆ ಪ್ರತಿಯಾಗಿ ‘ನಮ್ಮ ಕ್ಷೇತ್ರದಿಂದ ಗೆದ್ದು ಮತ್ತ ಮುಖ್ಯಮಂತ್ರಿ ಆಗುವುದಾದರೆ ನಾವೇಕೆ ಸೋಲಿಸಬೇಕು’ ಎಂಬ ಸಕಾರಾತ್ಮಕ ವಿವೇಚನೆಯನ್ನು ಜಾಗೃತಗೊಳಿಸುವ ಪ್ರಯತ್ನವೂ ಮುಂದುವರಿದಿದೆ.

ಸಿದ್ದರಾಮಯ್ಯ ಪುತ್ರ ಡಾ. ಯತೀಂದ್ರ ಅವರು ಸ್ಪರ್ಧಿಸಿರುವ ವರುಣಾದಲ್ಲಿ ಇದ್ದ ಗೊಂದಲ ನಿವಾರಿಸಿ, ಅವರ ಹಾದಿ ಸುಗಮ ಮಾಡುವ ಪ್ರಯತ್ನ ನಡೆದಿದೆ.

****

ಹೊಸ ಮತದಾರರು: 61069

***

ಕ್ಷೇತ್ರಗಳು    2008                                 2013

ಕೃಷ್ಣರಾಜ: ಎಸ್‌.ಎ.ರಾಮದಾಸ್‌ (ಬಿಜೆಪಿ),       ಎಂ.ಕೆ.ಸೋಮಶೇಖರ್‌ (ಕಾಂಗ್ರೆಸ್‌)

ಚಾಮರಾಜ: ಶಂಕರಲಿಂಗೇಗೌಡ (ಬಿಜೆಪಿ),         ವಾಸು (ಕಾಂಗ್ರೆಸ್‌)

ನರಸಿಂಹರಾಜ: ತನ್ವೀರ್‌ ಸೇಠ್‌ (ಕಾಂಗ್ರೆಸ್‌),     ತನ್ವೀರ್ ಸೇಠ್‌ (ಕಾಂಗ್ರೆಸ್‌)

ಚಾಮುಂಡೇಶ್ವರಿ: ಎಂ.ಸತ್ಯನಾರಾಯಣ (ಕಾಂಗ್ರೆಸ್‌),  ಜಿ.ಟಿ.ದೇವೇಗೌಡ (ಜೆಡಿಎಸ್‌)

ವರುಣಾ: ಸಿದ್ದರಾಮಯ್ಯ (ಕಾಂಗ್ರೆಸ್‌),           ಸಿದ್ದರಾಮಯ್ಯ (ಕಾಂಗ್ರೆಸ್‌)

ಪಿರಿಯಾಪಟ್ಟಣ: ಕೆ.ವೆಂಕಟೇಶ್‌ (ಕಾಂಗ್ರೆಸ್‌),       ಕೆ.ವೆಂಕಟೇಶ್‌ (ಕಾಂಗ್ರೆಸ್‌)

ಕೆ.ಆರ್‌.ನಗರ: ಸಾ.ರಾ.ಮಹೇಶ್‌ (ಜೆಡಿಎಸ್‌),     ಸಾ.ರಾ.ಮಹೇಶ್‌ (ಜೆಡಿಎಸ್‌)

ಹುಣಸೂರು: ಎಚ್‌.ಪಿ.ಮಂಜುನಾಥ್‌ (ಕಾಂಗ್ರೆಸ್‌),   ಎಚ್‌.ಪಿ.ಮಂಜುನಾಥ್‌ (ಕಾಂಗ್ರೆಸ್‌)

ಎಚ್‌.ಡಿ.ಕೋಟೆ: ಚಿಕ್ಕಣ್ಣ (ಕಾಂಗ್ರೆಸ್‌),              ಎಸ್‌.ಚಿಕ್ಕಮಾದು (ಜೆಡಿಎಸ್‌)

ನಂಜನಗೂಡು: ವಿ.ಶ್ರೀನಿವಾಸಪ್ರಸಾದ್‌ (ಕಾಂಗ್ರೆಸ್‌), ವಿ.ಶ್ರೀನಿವಾಸಪ್ರಸಾದ್‌ (ಕಾಂಗ್ರೆಸ್)         * ಕಳಲೆ ಕೇಶವಮೂರ್ತಿ (ಕಾಂಗ್ರೆಸ್‌– 2017ರ ಉಪಚುನಾವಣೆ)

ತಿ.ನರಸೀಪುರ: ಎಚ್.ಸಿ.ಮಹದೇವಪ್ಪ (ಕಾಂಗ್ರೆಸ್‌), ಎಚ್‌.ಸಿ.ಮಹದೇವಪ್ಪ (ಕಾಂಗ್ರೆಸ್‌)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT