ಕಾರವಾರ: ‘ತಾಲ್ಲೂಕಿನಿಂದ ಗೋವಾಕ್ಕೆ ಅಕ್ರಮವಾಗಿ ಮರಳು ಸಾಗಣೆ ಆಗದಂತೆ ತಡೆಯಬೇಕು. ಸ್ಥಳೀಯರಿಗೆ ವಿವಿಧ ಕಾಮಗಾರಿಗಳಿಗೆ ಮರಳು ಸಿಗುವಂತೆ ವ್ಯವಸ್ಥೆ ಮಾಡಬೇಕು’ ಎಂದು ಕರುನಾಡ ರಕ್ಷಣಾ ವೇದಿಕೆಯು ಜಿಲ್ಲಾಡಳಿತವನ್ನು ಒತ್ತಾಯಿಸಿದೆ.
ಈ ಕುರಿತು ಸಂಘಟನೆಯ ಪದಾಧಿಕಾರಿಗಳು ಗುರುವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
‘ಕಾಳಿ ನದಿಯಿಂದ ಮರಳು ತೆಗೆಯುವುದನ್ನು ನಿರ್ಬಂಧಿಸಿದ್ದರಿಂದ ಸ್ಥಳೀಯ ಕಾಮಗಾರಿಗಳಿಗೆ ಮರಳಿನ ಕೊರತೆಯಾಗಿದೆ. ಈ ಹಿಂದೆ ಮರಳು ಗಣಿಗಾರಿಕೆಗೆ ಪರವಾನಗಿ ನೀಡಿದ್ದಾಗ, ಕೆಲವರು ಖಾಲಿ ಜಾಗದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಮರಳು ದಾಸ್ತಾನು ಮಾಡಿದ್ದಾರೆ. ಅಂಥವರು ಯಾವುದೇ ಕಾಮಗಾರಿ ಇಲ್ಲದಿದ್ದರೂ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹಿಸಿದ್ದಾರೆ. ಹೆಚ್ಚಿನ ದರದಲ್ಲಿ ಮಾರಾಟ ಮಾಡಲು ಗೋವಾಕ್ಕೆ ಅಕ್ರಮವಾಗಿ ಸಾಗಿಸುತ್ತಿದ್ದಾರೆ’ ಎಂದು ಮನವಿಯಲ್ಲಿ ದೂರಿದ್ದಾರೆ.
‘ಖಾಲಿ ಜಾಗದಲ್ಲಿ ಅಧಿಕ ಪ್ರಮಾಣದಲ್ಲಿ ಮರಳನ್ನು ಯಾವ ಉದ್ದೇಶಕ್ಕೆ ಸಂಗ್ರಹಿಸಲಾಗಿದೆ ಎಂಬುದರ ದಾಖಲೆಯನ್ನು ಪರಿಶೀಲಿಸಬೇಕು. ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿರುವ ಮರಳನ್ನು ಜಪ್ತಿ ಮಾಡಿ, ನಿರ್ಮಿತಿ ಕೇಂದ್ರ ಅಥವಾ ಇತರ ಸಂಬಂಧಿಸಿ ಇಲಾಖೆಗಳ ಮೂಲಕ ಬಡ ಜನರ ಕಾಮಗಾರಿಗಳಿಗೆ ದೊರಕಿಸಿಕೊಡಬೇಕು’ ಎಂದು ಒತ್ತಾಯಿಸಿದ್ದಾರೆ.
‘ಮಾಜಾಳಿಯ ತಪಾಸಣಾ ಕೇಂದ್ರದ ಮೂಲಕ ಲಾರಿಗಳಲ್ಲಿ ಅಕ್ರಮವಾಗಿ ಮರಳು ಸಾಗಿಸುತ್ತಿರುವ ಬಗ್ಗೆ ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸಬೇಕು’ ಎಂದೂ ಆಗ್ರಹಿಸಿದ್ದಾರೆ.
ಸಂಘಟನೆಯ ಅಧ್ಯಕ್ಷ ಎನ್.ದತ್ತ, ಪ್ರಮುಖರಾದ ಸುನೀಲ ನಾಯ್ಕ, ನಾಗೇಂದ್ರ ಅಂಚೇಕರ್, ಮಂಗೇಶ ನಾಯ್ಕ, ಗುರುದಾನ ನಾಯ್ಕ, ಮದನ ಗುನಗಿ, ದೀಪಕ್ ಲಾಂಚೇಕರ್, ಪ್ರಭು ರೊಜಾರಿಯೊ ಇದ್ದರು.