ಶಿರಸಿ: ಅಕಾಲಿಕ ಮಳೆಯಿಂದ ಅಪಾರ ಪ್ರಮಾಣದಲ್ಲಿ ಮೆಕ್ಕೆಜೋಳ ಹಾನಿ ಉಂಟಾಗಿರುವ ಬನವಾಸಿ ವ್ಯಾಪ್ತಿಯ ಗ್ರಾಮಗಳಿಗೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಶನಿವಾರ ಭೇಟಿ ನೀಡಿ ಸಮೀಕ್ಷೆ ನಡೆಸಿದರು.
ತಿಗಣೆ, ಅಜ್ಜರಣಿಯ ಮೊದಲಾದೆಡೆ ಜೋಳ ಹಾನಿಯಾದ ಗದ್ದೆಗೆ ಅಧಿಕಾರಿಗಳ ತಂಡದ ಜತೆ ತೆರಳಿದ ಅವರು ರೈತರ ಜತೆ ಸಮಾಲೋಚನೆ ನಡೆಸಿದರು.
‘ರಾಷ್ಟ್ರೀಯ ಪ್ರಕೃತಿ ವಿಕೋಪ ಪರಿಹಾರ ಅಡಿಯಲ್ಲಿ ಹಾನಿಯಾದ ಬೆಳೆಗೆ ಸೂಕ್ತ ಪರಿಹಾರ ಒದಗಿಸಲಾಗುವುದು. ಹಾನಿಯಾದ ಸಮೀಕ್ಷೆ ವಿವರವನ್ನು ವಿಳಂಬವಿಲ್ಲದೆ ಸರ್ಕಾರಕ್ಕೆ ಕಳುಹಿಸಲಾಗುವುದು’ ಎಂದು ಜಿಲ್ಲಾಧಿಕಾರಿ ರೈತರಿಗೆ ಭರವಸೆ ನೀಡಿದರು.
‘ತೆನೆ ಬಂದರೂ ಕೈಸೇರದ ಜೋಳ’ ಶೀರ್ಷಿಕೆ ಅಡಿ ‘ಪ್ರಜಾವಾಣಿ’ ಮೇ 21 ರಂದು ವರದಿ ಪ್ರಕಟಿಸಿತ್ತು.
ಉಪವಿಭಾಗಾಧಿಕಾರಿ ದೇವರಾಜ ಆರ್., ಕೃಷಿ ಇಲಾಖೆ ಉಪನಿರ್ದೇಶಕ ಟಿ.ಎಚ್.ನಟರಾಜ್, ತಹಶೀಲ್ದಾರ್ ಎಂ.ಆರ್.ಕುಲಕರ್ಣಿ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮಧುಕರ ನಾಯ್ಕ, ಸ್ಥಳಿಯ ಪ್ರಮುಖರಾದ ವೀರಭದ್ರ ಗೌಡರ್, ಇತರರು ಇದ್ದರು.