ಭಟ್ಕಳ: ಇಲ್ಲಿನ ಕಾಗೆ ಗುಡ್ಡ ಸಮೀಪ ಸಮುದ್ರದಲ್ಲಿ ಸಿಲುಕಿದ್ದ ನಾಲ್ವರು ಮೀನುಗಾರರನ್ನು ಎಂಟು ತಾಸಿನ ನಂತರ ಇತರ ಮೀನುಗಾರರೇ ರಕ್ಷಿಸಿದ್ದಾರೆ. ಭಾರಿ ಗಾಳಿ ಮಳೆಗೆ ಸಿಲುಕಿ, ದಡಕ್ಕೆ ಬರಲಾಗದೇ ಅವರು ಆತಂಕದಲ್ಲಿದ್ದರು. ತಮ್ಮ ಸ್ಥಿತಿಯ ಬಗ್ಗೆ ಸಂಬಂಧಿಕರಿಗೆ ಕರೆ ಮಾಡಿ ತಿಳಿಸಿದ್ದರು.
ಭಾನುವಾರ ಬೆಳಿಗ್ಗೆ ಐದರ ಸುಮಾರಿಗೆ ಭಟ್ಕಳದ ಅಳ್ವೆಕೋಡಿಯ ಮಾದೇವ ತಿಮ್ಮಪ್ಪ ಮೊಗೇರ ಮಾಲೀಕತ್ವದ ‘ಗಿಲ್ನೇಟ್’ ದೋಣಿಯಲ್ಲಿ ಮೀನುಗಾರರು ತೆರಳಿದ್ದರು. ಅಷ್ಟರಲ್ಲಿ ಶುರುವಾದ ಭಾರಿ ಗಾಳಿ ಮಳೆಗೆ ಸಮುದ್ರದಲ್ಲಿ ಅಲೆಗಳು ಹೆಚ್ಚಾಗಿ ದೋಣಿ ತೀರಕ್ಕೆ ಬರಲು ಸಾಧ್ಯವಾಗಲಿಲ್ಲ. ಈ ವಿಚಾರ ಗೊತ್ತಾದ ಅವರ ಕುಟುಂಬದವರು ಮೀನುಗಾರಿಕಾ ಇಲಾಖೆಗೆ ಮಾಹಿತಿ ನೀಡಿದರು.
ಈ ನಡುವೆ ಮುಂಡಳ್ಳಿಯಿಂದ ಮೀನುಗಾರರಾದ ಅಬೂಬಕರ್, ವಿನೋದ ಮೊಗೇರ್, ರವಿದಾಸ ಮೊಗೇರ್, ಕೃಷ್ಣ ಮೊಗೇರ್ ಹಾಗೂ ಮಂಜುನಾಥ ಮೊಗೇರ್ ಎಂಬುವವರು ಸಹಾಯಕ್ಕೆ ಧಾವಿಸಿದರು. ಮತ್ತೊಂದು ದೋಣಿಯಲ್ಲಿ ಅವರು ಕಾಗೆ ಗುಡ್ಡದತ್ತ ಸಾಗಿದರು.
ಅಲ್ಲಿದ್ದ ನಾಲ್ವರು ಮೀನುಗಾರರಾದ ಸಚಿನ್ ಮೊಗೇರ, ನಾರಾಯಣ ಮೊಗೇರ, ಜ್ಞಾನೇಶ ಮೊಗೇರ ಹಾಗೂ ಹರೀಶ್ ಮೊಗೇರ ಅವರನ್ನು ಅಪಾಯದಿಂದ ರಕ್ಷಿಸಿ ಸಂಜೆ ಐದರ ಸುಮಾರಿಗೆ ದಡ ಸೇರಿಸಿದರು. ಆದರೆ, ಅಲೆಗಳು ಹೆಚ್ಚಾದ ಕಾರಣ ಅವರ ದೋಣಿಯನ್ನು ಅಲ್ಲೇ ಲಂಗರು ಹಾಕಿ ಬಂದರು.