ಹೊನ್ನಾವರ: ಎಲ್ಲ ಜಾತಿ, ಸಮುದಾಯಗಳನ್ನು ಸೇರಿಸಿಕೊಂಡು ಮುನ್ನಡೆವ ಸಿದ್ಧಾಂತ ಹೊಂದಿರುವ ಕಾಂಗ್ರೆಸ್ ಪಕ್ಷ ಜಿಲ್ಲೆಯ ಬಹುಸಂಖ್ಯಾತ ನಾಮಧಾರಿ ಸಮಾಜ ಬಾಂಧವರಿಗೆ ಸೂಕ್ತ ಅವಕಾಶ ನೀಡಲು ಬದ್ಧವಾಗಿದೆ' ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ ತಿಳಿಸಿದರು.
ಕಾಂಗ್ರೆಸ್ ಪಕ್ಷದ ಪ್ರಚಾರ ಕಾರ್ಯಾಲಯದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಕುಮಟಾ ವಿಧಾನಸಭಾ ಕ್ಷೇತ್ರದಲ್ಲಿ ಬಂಡಾಯ ಅಥವಾ ಭಿನ್ನಮತವಿಲ್ಲ. ಅಭ್ಯರ್ಥಿ ಆಕಾಂಕ್ಷಿ ಮಂಜುನಾಥ ನಾಯ್ಕ ಸೇರಿದಂತೆ ಎಲ್ಲರೂ ನಿವೇದಿತ್ ಆಳ್ವಾ ಪರ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ' ಎಂದು ಅವರು ಹೇಳಿದರು.
'ಪಾಳು ಬಿದ್ದ ಮಸೀದಿ, ದೇವಸ್ಥಾನ, ಸ್ಮಶಾನದ ಕುರಿತು ವಿವಾದ ಹುಟ್ಟಿಸುವ ಬಿಜೆಪಿ ನಾಯಕರು ಬೆಲೆ ಏರಿಕೆ, ನಿರುದ್ಯೋಗ, ಭ್ರಷ್ಟಾಚಾರದಂಥ ಸಮಸ್ಯೆಗಳ ಕುರಿತು ಮಾತನಾಡುತ್ತಿಲ್ಲ. ಮೀಸಲಾತಿ ಹಕ್ಕನ್ನು ಮುಸ್ಲಿಂರಿಂದ ಕಸಿದುಕೊಂಡಿದ್ದ ಬಿಜೆಪಿ ಸರ್ಕಾರಕ್ಕೆ ಕೋರ್ಟ್ ತಕ್ಕ ಶಾಸ್ತಿ ಮಾಡಿದೆ' ಎಂದು ಅವರು ತಿಳಿಸಿದರು.
ಡಿಸಿಸಿ ಅಧ್ಯಕ್ಷ ಸಾಯಿ ಗಾಂವ್ಕರ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸಮೂರ್ತಿ, ವಿ.ಎಸ್.ಆರಾಧ್ಯ, ಸದಸ್ಯ ಎಂ.ಎನ್.ಸುಬ್ರಹ್ಮಣ್ಯ, ಬಿಸಿಸಿ ಅಧ್ಯಕ್ಷ ಜಗದೀಪ ತೆಂಗೇರಿ, ಹೊನ್ನಪ್ಪ ನಾಯ್ಕ ಇದ್ದರು.