ಕಾರವಾರ: ‘ಮರಳು ಗಣಿಗಾರಿಕೆ ನಿಷೇಧಿಸಿ ಸುಪ್ರೀಂಕೋರ್ಟ್ನ ರಾಷ್ಟ್ರೀಯ ಹಸಿರು ಪೀಠದ (ಎನ್.ಜಿ.ಟಿ) ಆದೇಶವು ಉಡುಪಿ ಜಿಲ್ಲೆಗೆ ಮಾತ್ರ ಸೀಮಿತವಾಗಿದೆ ಎಂದು ರಾಜ್ಯ ಹೈಕೋರ್ಟ್ ತಿಳಿಸಿದೆ. ಅದರಂತೆ ದಕ್ಷಿಣ ಕನ್ನಡದಲ್ಲಿ ಮರಳು ದಿಬ್ಬಗಳ ತೆರವಿಗೆ ಅನು ಮತಿ ನೀಡಲಾಗಿದೆ. ಅದೇ ಮಾದರಿಯಲ್ಲಿ ಉತ್ತರ ಕನ್ನಡದಲ್ಲೂ ಅವಕಾಶ ನೀಡಬೇಕು’ ಎಂದು ಹೊಂಯ್ಗೆ ಕಾರ್ಮಿಕರ ಸಂಘವು ಜಿಲ್ಲಾಧಿಕಾರಿಯನ್ನು ಒತ್ತಾಯಿಸಿದೆ.
‘ಎನ್.ಜಿ.ಟಿ ಆದೇಶವನ್ನು ಆಧರಿಸಿ ಮೇ 18ರಂದು ಸಾಂಪ್ರದಾಯಿಕವಾಗಿ ಮರಳು ದಿಬ್ಬಗಳನ್ನು ತೆರವುಗೊಳಿಸಿ ಸಾಗಿಸುವುದನ್ನು ಸ್ಥಗಿತಗೊಳಿಸಲು ಜಿಲ್ಲಾಡಳಿತವು ಆದೇಶಿಸಿತು. ಇದೇ ರೀತಿಯಲ್ಲಿ ದಕ್ಷಿಣ ಕನ್ನಡದಲ್ಲೂ ಆದೇಶಿಸಲಾಗಿತ್ತು. ಇದನ್ನು ಪ್ರಶ್ನಿಸಿದ ಅಲ್ಲಿನ ಕೆಲವು ಗುತ್ತಿಗೆದಾರರು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಪರಿಶೀಲಿಸಿದ ನ್ಯಾಯಾಲಯವು, ಎನ್.ಜಿ.ಟಿ ಆದೇಶವು ಉಡುಪಿಯನ್ನು ಹೊರತುಪಡಿಸಿ ಇತರ ಜಿಲ್ಲೆಗಳಿಗೆ ಅನ್ವಯಿಸುವುದಿಲ್ಲ ಎಂದು ತಿಳಿಸಿದೆ’ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
‘ಇದನ್ನು ಆಧಾರವಾಗಿಟ್ಟುಕೊಂಡು ದಕ್ಷಿಣ ಕನ್ನಡದಲ್ಲಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಏಳು ಸದಸ್ಯರ ಸಮಿತಿಯು ನ.14ರಂದು ಸಭೆ ಸೇರಿದೆ. ಮರಳು ದಿಬ್ಬಗಳನ್ನು ತೆರವು ಮಾಡಲು ಅನುಮತಿ ನೀಡಿದೆ. ಇದೇ ರೀತಿಯಲ್ಲಿ ಇಲ್ಲೂ ಮರಳು ಉಸ್ತುವಾರಿ ಸಮಿತಿಯ ಸಭೆ ಕರೆದು ಮರಳು ಗಣಿಗಾರಿಕೆ ಮತ್ತು ಸಾಗಣೆಗೆ ಅನುಮತಿ ನೀಡಬೇಕು’ ಎಂದು ಒತ್ತಾಯಿಸಲಾಗಿದೆ.
ಸಂಘದ ಪ್ರಮುಖರಾದ ದಿಗಂಬರ ಶೇಟ್, ವಿನೋದ ನಾಯ್ಕ, ನಿತ್ಯಾನಂದ ನಾಯಕ, ಅರವಿಂದ ಕಲ್ಗುಟ್ಕರ್, ಗೋವಿಂದ ನಾಯ್ಕ, ರಮಾಕಾಂತ ಮೇಸ್ತ, ಪಾಂಡುರಂಗ ಪೆಡ್ನೇಕರ್, ಸೈಮನ್ ರೋಡ್ರಿಗಸ್ ಇದ್ದರು.