ಶಿರಸಿ: ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ ಅವರಿಗೆ ರಾಜ್ಯ ಸಚಿವ ಸಂಪುಟದಲ್ಲಿ ಸ್ಥಾನ ಸಿಗಲಿ ಎಂದು ಪ್ರಾರ್ಥಿಸಿ ಅವರ ಬೆಂಬಲಿಗರು ತಾಲ್ಲೂಕಿನ ಗುಡ್ನಾಪುರದ ಬಂಗಾರೇಶ್ವರ ದೇವಸ್ಥಾನದಲ್ಲಿ ಮಂಗಳವಾರ ವಿಶೇಷ ಪೂಜೆ ಸಲ್ಲಿಸಿದರು.
ಯಡಿಯೂರಪ್ಪ ಸಂಪುಟದಲ್ಲಿ ಕಾರ್ಮಿಕ ಸಚಿವರಾಗಿದ್ದ ಶಿವರಾಮ ಹೆಬ್ಬಾರ ಅವರಿಗೆ ಬಸವರಾಜ ಬೊಮ್ಮಾಯಿ ಸರ್ಕಾರದಲ್ಲಿ ಮಹತ್ವದ ಖಾತೆ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದಾಗಿ ಬೆಂಬಲಿಗರು ತಿಳಿಸಿದರು.
ಲಕ್ಷ್ಮೀ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷೆ ಮಂಗಲಾ ನಾಯ್ಕ ಮಾತನಾಡಿ, ‘ಮೂರು ಬಾರಿ ಶಾಸಕರಾಗಿರುವ ಹೆಬ್ಬಾರ ಕಳೆದ ಅವಧಿಯಲ್ಲಿ ಸಚಿವರಾಗಿ ಉತ್ತಮ ಕೆಲಸ ನಿರ್ವಹಿಸಿದ್ದಾರೆ. ಜಿಲ್ಲೆಯ ಉಸ್ತುವಾರಿ ಸಚಿವರಾಗಿ ನೆರೆ, ಕೋವಿಡ್ ಪರಿಸ್ಥಿತಿಯನ್ನೂ ಚೆನ್ನಾಗಿ ನಿಭಾಯಿಸಿದ್ದು ಮತ್ತೆ ಅವರನ್ನು ಸಚಿವರಾಗಿ ಮುಂದುವರೆಸಲಿ’ ಎಂದು ಒತ್ತಾಯಿಸಿದರು.
ಗುಡ್ನಾಪುರ ಗ್ರಾಮ ಪಂಚಾಯ್ತಿ ಸದಸ್ಯ ರಾಘು ನಾಯ್ಕ, ಪ್ರಮುಖರಾದ ವೆಂಕಟೇಶ ಹೆಗಡೆ ಬೆಂಗಳೆ, ಕೇಶವ ನಾಯ್ಕ, ವಿನಾಯಕ ನಾಯ್ಕ, ಕಿರಣ ಮಡಿವಾಳ, ಅಜಯ ಕಬ್ಬಢರ, ಗಣಪತಿ ಶೇಟ್, ಮೋಹನ ರೆಡ್ಡಿ ಇದ್ದರು.