ಕಾರವಾರ: ತಾಲ್ಲೂಕಿನ ಸದಾಶಿಗಡದ ಹಜರತ್ ಶಾ ಸಂಶುದ್ದೀನ್ ಉರ್ಫ್ ಶಾ ಕಜರಮುದ್ದೀನ್ ಅವ್ಲಿಯಾ ಅಲ್ಲಾ ದರ್ಗಾದ ವಾರ್ಷಿಕ ಉರೂಸ್ ಗುರುವಾರ ರಾತ್ರಿ ಅದ್ಧೂರಿಯಾಗಿ ತೆರೆಕಂಡಿತು.
ಎರಡು ದಿನಗಳಿಂದ ನಡೆಯುತ್ತಿದ್ದ ಈ ಮಹೋತ್ಸವವು, ದೆಹಲಿಯ ಕಲಾವಿದರಾದ ಗುಲಾಂ ಫಾಹೀಂ ವಾರಸಿ ಹಾಗೂ ಶಾಕೀರ ನಾಝಾ ತಂಡದವರಿಂದ ಕವ್ವಾಲಿ ಗಾಯನದೊಂದಿಗೆ ಸಂಪನ್ನಗೊಂಡಿತು. ಈ ಸಂದರ್ಭದಲ್ಲಿ ಸಾವಿರಾರು ಜನರು ಜಮಾಯಿಸಿದ್ದರು.
ಉತ್ಸವದ ನಿಮಿತ್ತ ದರ್ಗಾ ವಿದ್ಯುದ್ದೀಪಗಳಿಂದ ಕಂಗೊಳಿಸುತ್ತಿತ್ತು. ಇಲ್ಲಿಗೆ ಬಂದಿದ್ದ ಸಾವಿರಾರು ಮುಸಲ್ಮಾನರು ವಿಶೇಷ ಪೂಜೆ ಸಲ್ಲಿಸಿದರು. ಕೆಲವರು ಹರಕೆ ರೂಪದಲ್ಲಿ ಗಂಧದಕಡ್ಡಿ ಹಾಗೂ ಚಾದರ ಅರ್ಪಿಸಿದರು. ಹಿಂದೂಗಳು ಹಾಗೂ ಕ್ರೈಸ್ತರೂ ದರ್ಗಾಕ್ಕೆ ಬಂದು ಪ್ರಾರ್ಥನೆಸಲ್ಲಿಸಿದ್ದು ವಿಶೇಷವಾಗಿತ್ತು.
ವ್ಯಾಪಾರ ಭರಾಟೆ: ಉತ್ಸವದ ನಿಮಿತ್ತ ದರ್ಗಾಕ್ಕೆ ಸಾಗುವ ರಸ್ತೆಯಲ್ಲಿ ನೂರಾರು ಗೂಡಂಗಡಿಗಳು ತಲೆ ಎತ್ತಿದ್ದವು. ಮಳಿಗೆಯಲ್ಲಿದ್ದ ಅಲಂಕಾರಿಕ ವಸ್ತುಗಳು ಹಾಗೂ ಆಭರಣಗಳನ್ನು ಕೊಳ್ಳಲು ಜನರು ಮುಗಿಬಿದ್ದಿದ್ದರು. ಸ್ಥಳೀಯರಲ್ಲದೇ ನೆರೆ ರಾಜ್ಯಗಳಾದ ಗೋವಾ, ಮಹಾರಾಷ್ಟ್ರಗಳಿಂದಲೂ ಭಕ್ತರು ಬಂದಿದ್ದರು.