ಹೊನ್ನಾವರ: ಪರಿಸರ ಪ್ರವಾಸಿ ತಾಣಗಳಾದ ಕಾಸರಕೋಡ ಬೀಚ್ ನಿಂದ ಅಪ್ಸರಕೊಂಡ ಬೀಚ್ವರೆಗಿನ ನಡುವಿನ ಕಡಲತೀರ ಸ್ವಚ್ಛಗೊಳಿಸುವ ‘ಕಡಲ ತೀರ ಸ್ವಚ್ಛತಾ ಅಭಿಯಾನ’ ಅಕ್ಟೋಬರ್ 2ರಂದು ಬೆಳಿಗ್ಗೆ 8.30ಕ್ಕೆ ನಡೆಯಲಿದೆ.
’ಕಡಲ ತೀರ ಸ್ವಚ್ಛತಾ ಅಭಿಯಾನ’ದ ಕುರಿತಂತೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಎಸ್. ರಮೇಶ ಸೋಮವಾರ ವಿವಿಧ ಸಂಘಟನೆಗಳ ಪದಾಧಿಕಾರಿಗಳ ಹಾಗೂ ಅಧಿಕಾರಿಗಳ ಜೊತೆಗೆ ಸಮಾಲೋಚನೆ ನಡೆಸಿದರು.
‘ಅರಣ್ಯ ಪರಿಸರವನ್ನು ಸ್ವಚ್ಛವಾಗಿಡುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಹಮ್ಮಿಕೊಂಡಿರುವ ಈ ಅಭಿಯಾನಲ್ಲಿ ಎಲ್ಲರೂ ಕೈಜೋಡಿಸ ಬೇಕು’ ಎಂದು ಡಾ.ಎಸ್.ರಮೇಶ ಮನವಿ ಮಾಡಿದರು.
ವನ್ಯಜೀವಿ ಸಪ್ತಾಹ: ಅಕ್ಟೋಬರ್ನಲ್ಲಿ ಆಚರಿಸಲಾಗುವ ವನ್ಯಜೀವಿ ಸಪ್ತಾಹದ ಹಿನ್ನಲೆಯಲ್ಲಿ ತಾಲ್ಲೂಕಿನ ಪ್ರಾಥಮಿಕ, ಪ್ರೌಢ ಹಾಗೂ ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿ ಗಳಿಗಾಗಿ ವನ್ಯಜೀವಿಗಳ ಚಿತ್ರ ಬಿಡಿಸುವ ಹಾಗೂ ನಿಬಂಧ ಸ್ಪರ್ಧೆ ಏರ್ಪಡಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.
ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಆರ್.ಡಿ.ನಾಯ್ಕ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಆರ್.ಜಿ.ನಾಯ್ಕ, ವಲಯ ಅರಣ್ಯಾಧಿಕಾರಿ ವೀರಪ್ಪ ಗೌಡ, ಪ.ಪಂ. ಮುಖ್ಯಾಧಿಕಾರಿ ಲೀನಾ ಬ್ರಿಟೊ, ರೋಟರಿ ಅಧ್ಯಕ್ಷ ಪ್ರೊ.ಆರ್.ವಿ.ಹೆಗಡೆ, ಕಾರ್ಯದರ್ಶಿ ವಿ.ಜಿ.ನಾಯ್ಕ, ಲಯನ್ಸ್ ಕ್ಲಬ್ ಕಾರ್ಯದರ್ಶಿ ಡಾ.ಎಸ್.ಡಿ.ಹೆಗಡೆ, ಸ್ನೇಹಕುಂಜದ ರವೀಂದ್ರ ಶೆಟ್ಟಿ ಸಭೆಯಲ್ಲಿ ಭಾಗವಹಿಸಿದ್ದರು.