ಗಡಿಗೇಶ್ವರ (ನರಸಿಂಹರಾಜಪುರ): ಧರ್ಮದ ಆಚರಣೆ ಮತ್ತು ಈಶ್ವರನ ಆರಾಧನೆಯಿಂದ ಫಲ ಸಿಗುತ್ತದೆ ಎಂದು ಶೃಂಗೇರಿ ಶಾರದಾ ಪೀಠದ ಭಾರತೀ ತೀರ್ಥ ಸ್ವಾಮೀಜಿ ನುಡಿದರು.
ತಾಲ್ಲೂಕಿನ ಗಡಿಗೇಶ್ವರ ಗ್ರಾಮದಲ್ಲಿ ಭಾನುವಾರ ನೂತನವಾಗಿ ನಿರ್ಮಿಸಿರುವ ಭವಾನೀ ಶಂಕರ ಗಡಿಗೇಶ್ವರ ದೇವಸ್ಥಾನದ ಪ್ರತಿಷ್ಠಾ ಹಾಗೂ ಕುಂಭಾಭೀಷೇಕ ಮಹೋತ್ಸವದ ಅಂಗವಾಗಿ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.
ಧರ್ಮದಲ್ಲಿ ಶ್ರದ್ಧೆ, ಭಗವಂತನಲ್ಲಿ ಭಕ್ತಿ ಇಲ್ಲದಿದ್ದರೆ ಜೀವನವೇ ಅಲ್ಲ. ಮನುಷ್ಯ ಮತ್ತು ಬೇರೆ ಪ್ರಾಣಿಗಳಿಗಿರುವ ವ್ಯತ್ಯಾಸವೆಂದರೆ ಧರ್ಮ ಮತ್ತು ಭಗವಂತನನ್ನು ಆರಾಧಿಸುವ ಶಕ್ತಿ ಮನುಷ್ಯನಿಗೆ ಇದೆ. ಹಾಗಾಗಿ ಮಾನವನನ್ನು ಉತ್ಕೃಷ್ಟ ಎಂದು ಶಾಸ್ತ್ರ ಹೇಳಿದೆ. ದೇವರ ಆರಾಧನೆ ಮನುಷ್ಯನ ಒಳಿತಿಗಾಗಿ ಎಲ್ಲರ ಶ್ರೇಯಸ್ಸಿಗಾಗಿ ಹೊರತು ಯಾರನ್ನು ಸಂತೋಷಪಡಿಸಲು ಅಥವಾ ಹೆಸರನ್ನು ಪಡೆಯುವುದಕ್ಕಲ್ಲ.
ಭಗವಂತನ ಸನ್ನಿಧಿಯಲ್ಲಿ ಎಲ್ಲರೂ ಒಂದೇ ಎಂದರು. ವೇದಮೂರ್ತಿ, ಶ್ಯಾಮಲಗಣೇಶ್, ಅರವಿಂದ ಸೋಮಯಾಜಿ ಇದ್ದರು. ಸಭಾ ಕಾರ್ಯಕ್ಕೂ ಮುನ್ನಾ ಸ್ವಾಮೀಜಿ ಭವಾನೀಶಂಕರ ಗಡಿಗೇಶ್ವರ ಸ್ವಾಮಿಯ ಕುಂಭಾಭಿಷೇಕ, ಮಹಾಪೂಜೆ ಶಿಖರ ಪ್ರತಿಷ್ಠೆ ನೆರವೇರಿಸಿದರು.