ಶಿರಸಿ: ಉಪನಿಷತ್ತುಗಳಲ್ಲಿ ಮದ್ಯಪಾನವನ್ನು ಪಂಚಮಹಾಪಾಪಗಳ ಸಾಲಿಗೆ ಸೇರಿಸಲಾಗಿದೆ ಎಂದು ಸೋಂದಾ ಸ್ವರ್ಣವಲ್ಲಿ ಸಂಸ್ಥಾನದ ಗಂಗಾಧರೇಂದ್ರ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಹುಲೇಕಲ್ನಲ್ಲಿ ಶ್ರೀದೇವಿ ಪದವಿಪೂರ್ವ ಕಾಲೇಜು ಹಾಗೂ ಮದ್ಯಪಾನ ಸಂಯಮ ಮಂಡಳಿ ಗುರುವಾರ ಹಮ್ಮಿಕೊಂಡ ಮದ್ಯಪಾನ ಜಾಗೃತಿ ಬ್ರಹತ್ ಜಾಥಾ ಉದ್ಘಾಟನಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ ಸ್ವಾಮೀಜಿ ಆಶೀರ್ವಚನ ನೀಡಿದರು.
ಮದ್ಯಾಪಾನವನ್ನು ಅನಾದಿಕಾಲದಿಂದಲೂ ಸಮಾಜದ ಹಿರಿಯರು ಖಂಡಿಸುತ್ತಲೇ ಬಂದಿದ್ದಾರೆ. ಮುಗ್ಧ ಜನತೆ ಈ ಬಗ್ಗೆ ಅರಿಯದೇ ಮದ್ಯಪಾನ ಚಟಕ್ಕೆ ಬಿದ್ದಲ್ಲಿ ಅದರಿಂದಾಗುವ ಅನಾಹುತ ಮನಗಂಡು ಚಟದಿಂದ ಬಿಡುಗಡೆ ಹೊಂದಬೇಕು ಎಂದರು.
ಮದ್ಯಪಾನ ಮಾಡುವುದು ತಪ್ಪು ಎನ್ನುವುದನ್ನು ಋಷಿಗಳು ಗ್ರಂಥಗಳಲ್ಲಿ ಹೇಳಿದ್ದಾರೆ. ಮದ್ಯಪಾನ ನರಕದ ಚಿಂತನೆ ಮಾಡಿದಂತೆ ಎಂದು ಮಹಾಕವಿ ಕಾಳಿದಾಸ ಉಲ್ಲೇಖಿಸಿದ್ದಾರೆ ಎಂದು ಸ್ವಾಮೀಜಿ ನುಡಿದರು.
ಜಾಥಾ ಉದ್ಘಾಟಿಸಿದ ಜಿಲ್ಲಾಧಿಕಾರಿ ಬಿ.ಎನ್.ಕೃಷ್ಣಯ್ಯ, ಮದ್ಯಾಪನದ ಹಾವಳಿ ಎಲ್ಲೆಡೆ ಹಬ್ಬಿದೆ. ಇದನ್ನು ದೂರಗೊಳಿಸುವ ಕಾರ್ಯ ವಿದ್ಯಾರ್ಥಿಗಳಿಂದಲೇ ಆಗಬೇಕು ಎಂದರು.
ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಸಚ್ಚಿದಾನಂದ ಹೆಗಡೆ, ದೇಶದಲ್ಲಿ ಮದ್ಯಪಾನ ಚಟಕ್ಕೆ ಬೀಳುವವರ ಸರಾಸರಿ ವಯಸ್ಸು 19. ಇತ್ತೀಚೆಗೆ ಈ ಸರಕಾರಿ 11ಕ್ಕೆ ಇಳಿದಿದೆ.ಪ್ರತಿವರ್ಷ ಶೇ 15ರಷ್ಟು ಮಂದಿ ಹೊಸದಾಗಿ ಮದ್ಯಪಾನ ಚಟಕ್ಕೆ ಅಂಟಿಕೊಳ್ಳುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
ಉಪ ವಿಭಾಗಾಧಿಕಾರಿ ಜಿ. ಜಗದೀಶ, ಅಜಿತ ಮನೋಚೇತನಾ ಸಂಸ್ಥೆಯ ಮುಖ್ಯಸ್ಥ ಉದಯ ಸ್ವಾದಿ, ಗೃಹ ಸಚಿವರ ಕಾರ್ಯಾಲಯದ ವಿಶೇಷ ಕಾರ್ಯದರ್ಶಿ ಕೆಂಪೇಗೌಡ, ಡಾ. ಪಾಂಡುರಂಗಿ, ತಹಸೀಲ್ದಾರ ಎಚ್.ಕೆ.ಕೃಷ್ಣಮೂರ್ತಿ ಹಾಜರಿದ್ದರು.