ಹೊಸಪೇಟೆ (ವಿಜಯನಗರ): ಇಲ್ಲಿನ ಜಂಬುನಾಥ ರಸ್ತೆಯ ಪರಿಶಿಷ್ಟ ಪಂಗಡದವರ ವಿದ್ಯಾರ್ಥಿನಿಯರ ಹಾಸ್ಟೆಲ್ನಲ್ಲಿ ಬುಧವಾರ ರಾತ್ರಿ ಚಿಕನ್ ತಿಂದ 28 ವಿದ್ಯಾರ್ಥಿನಿಯರು ಅಸ್ವಸ್ಥರಾಗಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಹಾಸ್ಟೆಲ್ನಲ್ಲಿ ಎಂದಿನಂತೆ ಸಸ್ಯಾಹಾರಿ ಮತ್ತು ಮಾಂಸಾಹಾರಿ ಊಟ ಬಡಿಸಲಾಗಿತ್ತು. ಚಿಕನ್ ಸೇವಿಸಿದ 28 ವಿದ್ಯಾರ್ಥಿನಿಯರು ಮಧ್ಯರಾತ್ರಿ 2 ಗಂಟೆಯ ವೇಳೆಗೆ ವಾಂತಿ, ಭೇದಿ, ಹೊಟ್ಟೆನೋವಿನಿಂದ ಬಳಲಿದರು. ತಕ್ಷಣ ಅವರನ್ನು ಇಲ್ಲಿನ 100 ಹಾಸಿಗೆಗಳ ಉಪವಿಭಾಗ ಆಸ್ಪತ್ರೆಗೆ ದಾಖಲಿಸಲಾಯಿತು.
ಗುರುವಾರ ಬೆಳಿಗ್ಗೆ ಮತ್ತೆ ಆರು ಮಂದಿಗೆ ಇದೇ ತೊಂದರೆ ಕಾಣಿಸಿಕೊಂಡಿದ್ದು, ಹಾಸ್ಟೆಲ್ ನಲ್ಲೇ ನಿಗಾ ವಹಿಸಲಾಗಿದೆ.
ಸದ್ಯ ಎಲ್ಲಾ ವಿದ್ಯಾರ್ಥಿನಿಯರು ಅಪಾಯದಿಂದ ಪಾರಾಗಿದ್ದಾರೆ. ಫುಡ್ ಪಾಯಿಸನ್ನಿಂದ ಈ ರೀತಿಯ ತೊಂದರೆ ಆಗಿರಬೇಕು ಎಂದು ಶಂಕಿಸಾಗಿದೆ.
ಹಾಸ್ಟೆಲ್ನ ನೀರು ಶುದ್ಧೀಕರಣ ಘಟಕ ಕೆಟ್ಟುಹೋಗಿದೆ ಎಂದು ಹೇಳಲಾಗಿದೆ. ಹಾಸ್ಟೆಲ್ನಲ್ಲಿನ 17 ಮಂದಿ ವಿದ್ಯಾರ್ಥಿನಿಯರು ಕೇವಲ ಸಸ್ಯಾಹಾರ ಊಟ ಮಾಡಿದ್ದು, ಅವರಿಗೆ ಯಾವುದೇ ತೊಂದರೆ ಆಗಿಲ್ಲ.
ಜಮೀರ್ ಭೇಟಿ: ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್, ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್, ಜಿಲ್ಲಾ ಪಂಚಾಯಿತಿ ಸಿಇಒ ಸದಾಶಿವ ಪ್ರಭು ಬಿ., ಡಿಎಚ್ಒ ಡಾ.ಸಲೀಂ ಅವರು ಆಸ್ಪತ್ರೆಗೆ ಭೇಟಿ ನೀಡಿ ವಿದ್ಯಾರ್ಥಿನಿಯರ ಯೋಗಕ್ಷೇಮ ವಿಚಾರಿಸಿದರು.
‘ವಿದ್ಯಾರ್ಥಿನಿಯರು ಅಪಾಯದಿಂದ ಪಾರಾಗಿದ್ದಾರೆ. ಒಂದು ಆಂಬುಲೆನ್ಸ್ ಅನ್ನು ಹಾಸ್ಟೆಲ್ ಆವರಣದಲ್ಲಿ ಇರಿಸಲಾಗಿದ್ದು, ಪರಿಸ್ಥಿತಿಯನ್ನು ಅವಲೋಕಿಸಲಾಗುತ್ತಿದೆ. ಈ ಘಟನೆಯ ಬಗ್ಗೆ ಉಪವಿಭಾಗಾಧಿಕಾರಿ ಅವರಿಂದ ತನಿಖೆಗೆ ಆದೇಶ ನೀಡಲಾಗಿದೆ’ ಎಂದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ತಿಳಿಸಿದರು.