ಹೊಸಪೇಟೆ (ವಿಜಯನಗರ): ಹೊಸಪೇಟೆ ನಗರಸಭೆಯ ನಾಲ್ಕರಿಂದ ಐದು ಮಹತ್ವದ ಕಡತಗಳು ಮಾಯವಾಗಿರುವುದು ಮಂಗಳವಾರ ಸಾರ್ವಜನಿಕರ ಸಮ್ಮುಖದಲ್ಲೇ ಬಯಲಾಗಿರುವ ಬೆನ್ನಲ್ಲೇ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ನೀಡಿದ್ದಾರೆ.
ಕರ್ನಾಟಕ ರಕ್ಷಣಾ ವೇದಿಕೆ, ಪೊಲೀಸರು, ಮಾಧ್ಯಮದವರ ಸಮ್ಮುಖದಲ್ಲಿ ಮಂಗಳವಾರ ಕಡತಗಳ ಪರೀಕ್ಷೆ ನಡೆಸಿದಾಗ 4ರಿಂದ 5 ಕಡತಗಳು ಮಾಯವಾಗಿರುವುದು ತಿಳಿಯಿತು. ಪೊಲೀಸ್ ತನಿಖೆಯ ಭಾಗವಾಗಿ ಈ ಕಡತಗಳು ನ್ಯಾಯಾಲಯದಲ್ಲಿರುವ ಸಾಧ್ಯತೆ ಇದೆ ಎಂಬ ಮಾಹಿತಿಯನ್ನು ಪೌರಾಯುಕ್ತ ಬಿ.ಟಿ.ಬಂಡಿವಡ್ಡರ್ ನೀಡಿದರು.
ತಾನು ಪತ್ರ ಬರೆದೇ ಇಲ್ಲ, ಇದೊಂದು ನಕಲಿ ಪತ್ರ ಎಂದು ಸಿಬ್ಬಂದಿ ಹೇಳುತ್ತಿದ್ದಾರೆ. ಈ ಬಗ್ಗೆ ಮಂಗಳವಾರ ಪೊಲೀಸರಿಗೆ ದೂರು ನೀಡಲಿದ್ದಾರೆ. ನಕಲಿ ಸಹಿ ಬಗ್ಗೆ ವಿಚಾರಣೆ ನಡೆಯಲಿದೆ ಎಂದು ಅವರು ಹೇಳಿದರು.
ಈ ವಾದವನ್ನು ಒಪ್ಪಿಕೊಳ್ಳಲು ಸಿದ್ಧವಿಲ್ಲದ ಕರಾವೇ ಜಿಲ್ಲಾ ಘಟಕದ ಅಧ್ಯಕ್ಷ ತಾರಿಹಳ್ಳಿ ಹನುಮಂತಪ್ಪ, ಸಿಐಡಿ ಅಥವಾ ಲೋಕಾಯುಕ್ತ ತನಿಖೆ ಆಗಬೇಕು ಎಂದು ಆಗ್ರಹಿಸಿದರು.
‘ನಗರಸಭೆಯಲ್ಲಿ ಕಡತಗಳ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು, ಸಿಬ್ಬಂದಿಯೇ ಹೊಣೆಗಾರರು. ಕಡತಗಳು ಸಾರ್ವಜನಿಕ ಸ್ವತ್ತು. ಅವುಗಳು ಕಚೇರಿಯಲ್ಲೇ ಇರಬೇಕು. ಒಂದು ಕಡತವೂ ಆಚೀಚೆ ಆಗಬಾರದು. ಒಂದು ವೇಳೆ ನ್ಯಾಯಾಲಯದ ವಿಚಾರಣೆಗೆ ಒಯ್ದಿದ್ದರೆ ಅದರ ಮಾಹಿತಿಯೂ ನಮೂದಾಗಿರಬೇಕು. ಕಡತ ಕಾಣಿಸುತ್ತಿಲ್ಲ ಎಂದಾದರೆ ತಕ್ಷಣ ಪೊಲೀಸ್ ದೂರು ನೀಡಬೇಕು. ಅದ್ಯಾವುದೂ ಆಗಿಲ್ಲ. ಹೀಗಾಗಿ ತಪ್ಪು ಮಾಡಿದವರ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡುವುದು ನಿಶ್ಚಿತ’ ಎಂದು ಜಿಲ್ಲಾಧಿಕಾರಿ ದಿವಾಕರ್ ಅವರು ‘ಪ್ರಜಾವಾಣಿ‘ಗೆ ತಿಳಿಸಿದರು.
ಆಗಿದ್ದೇನು?: ‘ನಗರಸಭೆಯಿಂದ ಆರೇಳು ತಿಂಗಳ ಹಿಂದೆಯೇ 49 ಕಡತಗಳನ್ನು ಮಾಜಿ ಸಚಿವ ಆನಂದ್ ಸಿಂಗ್, ಅವರ ಅಳಿಯ ಸಂದೀಪ್ ಸಿಂಗ್, ಹಾಲಿ ಸದಸ್ಯರು, ಮಾಜಿ ಸದಸ್ಯ ವೇಣುಗೋಪಾಲ್ ಹಾಗೂ ಕೆಲವು ಅಧಿಕಾರಿಗಳು, ಸಿಬ್ಬಂದಿ ಸೇರಿಕೊಂಡು ಸಿ.ಸಿ.ಟಿ.ವಿ. ಕ್ಯಾಮೆರಾ ಬಂದ್ ಮಾಡಿಸಿಕೊಂಡು ಕಚೇರಿಯಿಂದ ತೆಗೆದುಕೊಂಡು ಹೋಗಿದ್ದಾರೆ. ಇದುವರೆಗೂ ತಂದುಕೊಟ್ಟಿಲ್ಲ‘ ಎಂಬ ದೂರನ್ನು ಇದೇ 10ರಂದು ಮುಖ್ಯಮಂತ್ರಿ ಮತ್ತು ಇತರ ಹಲವರಿಗೆ ಸಲ್ಲಿಸಲಾಗಿತ್ತು. ಕರ್ನಾಟಕ ರಕ್ಷಣಾ ವೇದಿಕೆಗೂ ಈ ದೂರು ಬಂದಿತ್ತು. ನಗರಸಭೆಯ ವಾಲ್ಮೇನ್ ಸುರೇಶ್ ಬಾಬು ಡಿ.ಎಚ್. ಅವರು ಈ ಪತ್ರ ಬರೆದಿದ್ದರು. ಇದರ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಕರವೇ ಆಯುಕ್ತರಿಗೆ ಕೇಳಿಕೊಂಡಿತ್ತು ಹಾಗೂ 19ರಂದು ದೂರಿನ ಪ್ರತಿಯನ್ನೂ ಒದಗಿಸಿತ್ತು. ಕಡತಗಳ ಬಗ್ಗೆ ಸಾರ್ವಜನಿಕವಾಗಿ ಪರಿಶೀಲನೆ ನಡೆಸಬೇಕು ಎಂದು ಒತ್ತಾಯಿಸಿದ್ದ ಮೇರೆಗೆ ಆಯುಕ್ತರು ಮಾಧ್ಯಮಗಳ ಸಮ್ಮುಖದಲ್ಲೇ ಕಡತಗಳನ್ನು ತರಿಸಿ ಪರಿಶೀಲಿಸಿದರು. ಆಗ 5 ಕಡತಗಳು ಕಣ್ಮರೆಯಾಗಿರುವುದನ್ನು ಒಪ್ಪಿಕೊಂಡರು.
ಬಳಿಕ ಮಾಧ್ಯಮದವರ ಜತೆಗೆ ಮಾತನಾಡಿದ ತಾರಿಹಳ್ಳಿ ಹುನುಮಂತಪ್ಪ, ಆಯುಕ್ತರು ಹೇಳಿದಂತೆ ನಾಲ್ಕೈದು ಕಡತಗಳಲ್ಲ, 13 ಕಡತಗಳು ಕಣ್ಮರೆಯಾಗಿವೆ. ಕೆಲವೊಂದಕ್ಕೆ ಎರಡೆರಡು ಕಡತಗಳ ಹೆಸರು ಸೇರಿಕೊಂಡಿವೆ ಎಂಬ ಸಮಜಾಯಿಸಿ ನೀಡುತ್ತಿದ್ದಾರೆ. ಇದನ್ನು ಒಪ್ಪಿಕೊಳ್ಳಲಾಗದು. ಕಚೇರಿಯಲ್ಲಿ ಹಲವು ಕಡೆ ಸಿ.ಸಿ.ಟಿ.ವಿ.ಕ್ಯಾಮೆರಾಗಳು ಈಗಲೂ ಕಾರ್ಯನಿರ್ವಹಿಸುತ್ತಿಲ್ಲ. ಇಡೀ ಪ್ರಕರಣದಲ್ಲಿ ಕೆಲವು ಶಕ್ತಿಗಳು ಶಾಮೀಲಾಗಿರುವುದು ಸ್ಪಷ್ಟವಾಗಿದ್ದು, ಉನ್ನತ ಮಟ್ಟದ ತನಿಖೆ ಆಗಲೇಬೇಕು ಎಂದರು.
ಈ ಬಗ್ಗೆ ಸ್ವತಃ ಸಂದೀಪ್ ಸಿಂಗ್ ಅವರನ್ನೇ ಸಂಪರ್ಕಿಸಿದಾಗ, ನಕಲಿ ಪತ್ರಗಳ ಬಗ್ಗೆ ಪ್ರತಿಕ್ರಿಯೆ ನೀಡುವುದಕ್ಕೇನಿದೆ ಎಂದರು. ’ಭೂಗಳ್ಳರೇ ಸೃಷ್ಟಿ ಮಾಡಿದಂತಹ ಕತೆ ಇದಾಗಿರಬಹುದು’ ಎಂದು ಹೇಳಿದರು.
‘ನಾನು ಪತ್ರ ಬರೆದಿಲ್ಲ’
‘ನಾನು ಯಾರಿಗೂ ಯಾವುದೇ ಪತ್ರ ಬರೆದಿಲ್ಲ. ನನ್ನ ಸಹಿಯನ್ನು ನಕಲಿ ಮಾಡಿ ಪತ್ರ ಬರೆಯಲಾಗಿದೆ. ಸೋಮವಾರ ಸಂಜೆಯಷ್ಟೇ ಈ ಪತ್ರದ ಬಗ್ಗೆ ನನಗೆ ಮಾಹಿತಿ ಲಭಿಸಿದೆ. ಹೀಗಾಗಿ ಮಂಗಳವಾರ ಪೊಲೀಸರಿಗೆ ದೂರು ನೀಡುತ್ತಿದ್ದೇನೆ. ಪತ್ರದಲ್ಲಿ ಉಲ್ಲೇಖಿಸಿರುವಂತೆ ನನಗೆ ಯಾರೂ ಬೆದರಿಕೆ ಹಾಕಿಲ್ಲ’ ಎಂದು ನಗರಸಭೆಯ ವಾಲ್ಮೇನ್ ಸುರೇಶ್ ಬಾಬು ಡಿ.ಎಚ್. ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದರು.
‘ವಾರದ ಹಿಂದೆಯಷ್ಟೇ ಬಂದಿರುವೆ’
‘ಇಲ್ಲಿ ಅಕ್ರಮ ನಡೆದಿರುವ ಬಗ್ಗೆ ನನಗೆ ಏನೂ ಗೊತ್ತಿಲ್ಲ. ವಾರದ ಹಿಂದೆಯಷ್ಟೇ ನಾನಿಲ್ಲಿಗೆ ಬಂದಿದ್ದೇನೆ. ಬಂದಿರುವ ದೂರಿನ ಕುರಿತಂತೆ ತನಿಖೆ ನಡೆಸಲಾಗುತ್ತದೆ. ಸಿಬ್ಬಂದಿಯ ಸಹಿ ಹೊಂದಾಣಿಕೆ ಆಗುತ್ತದೆಯೇ ಎಂಬ ವಿಚಾರ ಸಹಿತ ಹಲವು ಆಯಾಮಗಳಲ್ಲಿ ತನಿಖೆ ನಡೆಯಲಿದೆ. ಕಡತಗಳ ರಕ್ಷಣೆ ಸಿಬ್ಬಂದಿಯ ಹೊಣೆ. ಹೀಗಾಗಿ ಕಡತಗಳು ಕಣ್ಮರೆಯಾಗಿದ್ದರೆ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಲಾಗುವುದು’ ಎಂದು ಪೌರಾಯುಕ್ತ ಬಿ.ಟಿ.ಬಂಡಿವಡ್ಡರ್ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.