ವಿಜಯಪುರ: ಕೋವಿಡ್ ಲಾಕ್ಡೌನ್ನಿಂದ ಸಂಕಷ್ಟಕ್ಕೆ ಸಿಲುಕಿರುವ ಯುವ ಕಲಾವಿದರಿಗೆ ಆರ್ಥಿಕ ನೆರವು ನೀಡುವಂತೆಅಖಿಲ ಕರ್ನಾಟಕ ವೃತ್ತಿ ರಂಗಭೂಮಿ ಕಲಾವಿದರ ಸಂಘದ ಪದಾಧಿಕಾರಿಗಳ ವತಿಯಿಂದ ಜಿಲ್ಲಾಧಿಕಾರಿಗೆ ಹಾಗೂ ಕನ್ನಡ ಮತ್ತು ಸಂಸ್ಕೃತ ಇಲಾಖೆಯ ಸಹಾಯಕ ನಿರ್ದೇಶಕರಿಗೆ ಮನವಿ ಸಲ್ಲಿಸಲಾಯಿತು.
ಸಂಘದ ಅಧ್ಯಕ್ಷ ಫಯಾಜ ಕರ್ಜಗಿ ಮಾತನಾಡಿ, ಆರ್ಥಿಕ ಸಂಕಷ್ಟದಲ್ಲಿರುವ ಕಲಾವಿದರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ರೂ 3 ಸಾವಿರ ರೂಪಾಯಿ ಆರ್ಥಿಕ ನೆರವನ್ನು ಪಡೆಯಲು 14 ನಿಯಮಗಳನ್ನು ಹೇರಿದೆ. ಅದರಲ್ಲಿ ಕೆಲವೊಂದು ನಿಯಮಗಳು ಕಲಾವಿದರನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸಿದೆ ಎಂದು ದೂರಿದರು.
ಈ ಯೋಜನೆಯಲ್ಲಿ ಧನ ಸಹಾಯ ಪಡೆಯಲು ಕನಿಷ್ಠ 35 ವರ್ಷ ಮೇಲ್ಪಟ್ಟಿರಬೇಕು ಹಾಗೂ 10 ವರ್ಷಗಳ ಸೇವೆ ಸಲ್ಲಿಸಿರಬೇಕು ಎನ್ನುವ ನಿಯಮಗಳು ಯುವ ಕಲಾವಿದರಿಗೆ ಸಮಸ್ಯೆಯಾಗಿವೆ ಎಂದರು.
ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಈಗಿರುವ ಪರಿಸ್ಥಿತಿಯಲ್ಲಿ ಕಲಾವಿದರು ಸೇವಾ ಸಿಂಧು ಮುಖಾಂತರ ಅರ್ಜಿಸಲ್ಲಿಸಲು ಆಗುತ್ತಿಲ್ಲ. ಲಾಕ್ ಡೌನ್ ಇರುವುದರಿಂದ ಸೇವಾ ಸಿಂಧು ಕೇಂದ್ರಗಳು ತೆರೆದಿರುವುದಿಲ್ಲ.ಅಲ್ಲದೇ, ಮೊಬೈಲ್ ಮುಖಾಂತರ ಅರ್ಜಿಗಳನ್ನು ಸಲ್ಲಿಸಲು ಕಲಾವಿದರಿಗೆ ಮಾಹಿತಿ ಇರುವುದಿಲ್ಲ ಎಂದು ಹೇಳಿದರು.