ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಗೇವಾಡಿಗೆ ಕ್ರೀಡಾಂಗಣ ಕೊರತೆ: ಶಾಲಾ, ಕಾಲೇಜು ಮೈದಾನವೇ ಆಟೋಟಕ್ಕೆ ಆಶ್ರಯ

ಶಾಲಾ, ಕಾಲೇಜು ಮೈದಾನವೇ ಆಟೋಟಕ್ಕೆ ಆಶ್ರಯ
Last Updated 12 ಫೆಬ್ರುವರಿ 2023, 19:30 IST
ಅಕ್ಷರ ಗಾತ್ರ

ಬಸವನಬಾಗೇವಾಡಿ: ತಾಲ್ಲೂಕು ಕೇಂದ್ರವಾದ ಬಸವನ ಬಾಗೇವಾಡಿ ಪಟ್ಟಣದಲ್ಲಿ ಕ್ರೀಡಾಪಟುಗಳುಗಳಿಗೆ ಅಗತ್ಯ ಕ್ರಿಡಾಂಗಣದ ಕೊರತೆ ಎದ್ದು ಕಾಣುತ್ತಿದೆ.

ಪಟ್ಟಣದಲ್ಲಿ ಸಾಕಷ್ಟು ಸಂಖ್ಯೆಯ ಕ್ರೀಡಾಪಟುಗಳು ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂಬ ಛಲ ಹೊಂದಿದ್ದಾರೆ. ಕೆಲವರು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಆದರೆ, ಅವರಿಗೆ ಸೂಕ್ತ ಪ್ರೋತ್ಸಾಹ ಹಾಗೂ ನಿರಂತರ ಅಭ್ಯಾಸಕ್ಕಾಗಿ ಕ್ರೀಡಾಂಗಣದ ಅವಶ್ಯಕತೆ ಇದೆ.

ಪಟ್ಟಣದ ಬಸವೇಶ್ವರ ಸರ್ಕಾರಿ ಪದವಿ ಪೂರ್ವ ಕಾಲೇಜು, ಬಿ.ಎಲ್.ಡಿ.ಇ ಸಂಸ್ಥೆಯ ಬಸವೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ, ನೂತನ ಹೈಸ್ಕೂಲ್‌ ಆವರಣ ಸೇರಿದಂತೆ ವಿವಿಧೆಡೆ ಪ್ರತಿದಿನ ಬೆಳಿಗ್ಗೆ ಕ್ರೀಡಾಸಕ್ತರು ವಿವಿಧ ಆಟಗಳ ಅಭ್ಯಾಸದಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ಆದರೆ, ಶಾಲೆ, ಕಾಲೇಜು ಆರಂಭವಾಗುವ ಮುನ್ನವೇ ಆಟ ಮುಗಿಸಬೇಕಾದ ಅನಿವಾರ್ಯತೆ ಇದೆ. ಪ್ರತ್ಯೇಕ ಕ್ರೀಡಾಂಗಣವಾದರೆ ವಿವಿಧ ಆಟಗಳಲ್ಲಿ ಹೆಚ್ಚಿನ ಸಮಯ ನಿರಂತರ ಅಭ್ಯಾಸ ಮಾಡಲು ಅನುಕೂಲವಾಗಲಿದೆ. ಅಲ್ಲದೇ, ವಾಯು ವಿಹಾರಿಗಳಿಗೆ ವಾಯು ವಿಹಾರಕ್ಕಾಗಿ ನಿರ್ಧಿಷ್ಟ ಸ್ಥಳ ಒದಗಿಸಿದಂತಾಗುತ್ತದೆ ಎಂದು ಕ್ರೀಡಾಪಟುಗಳು ಅಭಿಪ್ರಾಯಪಡುತ್ತಾರೆ.

ಪಂದ್ಯಾಟ ನಡೆಸಲು ತೊಂದರೆ:

ವಿವಿಧ ಸಂಘ, ಸಂಸ್ಥೆಯವರು, ಯುವಕ ಮಂಡಳಿಯವರು ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕ್ರೀಡಾಕೂಟಗಳನ್ನು ನಡೆಸುತ್ತಾರೆ. ಆದರೆ, ಕ್ರೀಡಾಕೂಟ ನಡೆಸಲು ನಿರ್ಧಿಷ್ಟ ಸ್ಥಳಾವಕಾಶ ಇಲ್ಲದೇ ಇರುವುದರಿಂದ ಪಂದ್ಯಾಟ ನಡೆಸಲು ಹಿಂದೇಟು ಹಾಕಿದ ಪ್ರಸಂಗಗಳು ನಡೆದಿವೆ.

ಪಟ್ಟಣಕ್ಕೆ ಹೊಂದಿಕೊಂಡು ವಿಶಾಲ ಜಾಗದಲ್ಲಿ ಕ್ರೀಡಾಂಗಣ ನಿರ್ಮಾಣವಾದರೆ ಸಂಘ, ಸಂಸ್ಥೆಯವರು ಹಾಗೂ ಶಾಲಾ ಕಾಲೇಜುಗಳ ತಾಲ್ಲೂಕು, ಜಿಲ್ಲಾ, ರಾಜ್ಯ ಮಟ್ಟದ ಕ್ರೀಡಾಕೂಟಗಳನ್ನು ನಡೆಸಲು ಅನುಕೂಲವಾಗಲಿದೆ. ಅಲ್ಲದೇ, ಹೆಚ್ಚಿನ ಸಂಖ್ಯೆಯ ಕ್ರೀಡಾಭಿಮಾನಿಗಳನ್ನು ಪಂದ್ಯಾಟಗಳನ್ನು ವೀಕ್ಷಣೆಗೆ ಅವಕಾಶ ಕಲ್ಪಿಸಿದಂತತಾಗುತ್ತದೆ.

ರಾಷ್ಟ್ರೀಯ ಹಬ್ಬಗಳ ಆಚರಣೆ ಹಾಗೂ ವಿವಿಧ ಸಾರ್ವಜನಿಕ ಕಾರ್ಯಕ್ರಗಳ ಆಯೋಜನೆಗೆ ಅನುಕೂಲವಾಗಲಿದೆ ಎಂಬುದು ಕೆಲ ಕ್ರೀಡಾಭಿಮಾನಿಗಳ ಅಭಿಪ್ರಾಯವಾಗಿದೆ.

‘ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆನ್ನುವ ಸಾಕಷ್ಟು ಕ್ರೀಡಾ ಪ್ರತಿಭೆಗಳಿವೆ. ಅವರ ತರಬೇತಿಗೆ ಸೂಕ್ತ ಸ್ಥಳವಕಾಶ ಇಲ್ಲದೇ ಇರುವುದರಿಂದ ಅವರು ಕ್ರೀಡಾ ಸಾಧನೆಯಿಂದ ವಂಚಿತರಾಗುತ್ತಿದ್ದಾರೆ. ಕ್ರೀಡಾಸಕ್ತರ ಅಭ್ಯಾಸಕ್ಕೆ ಕ್ರೀಡಾಂಗಣದೊಂದಿಗೆ ಸೂಕ್ತ ಪ್ರೋತ್ಸಾಹದ ಅಗತ್ಯತೆ ಇದೆ’ ಎಂದು ಕ್ರೀಡಾಪಟು ಮೌನೇಶ ಬಡಿಗೇರ ಒತ್ತಾಯಿಸಿದರು.

ಪಟ್ಟಣದಲ್ಲಿ ಇತ್ತೀಚೆಗೆ ಏರ್ಪಿಡಿಸಿದ್ದ ಎರಡು ಕ್ರಿಕೆಟ್ ಪಂದ್ಯಾಟಗಳಿಗೆ ಸಂಘಟಕರು ಕಾಲೇಜು ತರಗತಿ ಮುಗಿದ ನಂತರ ಹಾಗೂ ಕಾಲೇಜಿಗೆ ರಜೆ ಇದ್ದ ದಿನದಂದು ಆಯೋಜಿಸುವ ಸಂದರ್ಭ ಬಂದೊದಗಿದೆ.

ಇಲ್ಲಿನ ಎಪಿಎಂಸಿ ಆವರಣದ ಗೋದಾಮಿನಲ್ಲಿ ತಾತ್ಕಾಲಿಕವಾಗಿ ಪ್ರತಿದಿನ ಶಟಲ್ ಬ್ಯಾಡ್‌ಮಿಂಟನ್‌ ಆಟವಾಡಲು ಅನುಕೂಲ ಕಲ್ಪಿಸಿದ್ದರಿಂದ ಸಾಕಷ್ಟು ಕ್ರೀಡಾಪಟುಗಳು ಅದರ ಪ್ರಯೋಜನೆ ಪಡೆದಿದ್ದಾರೆ.

50ಕ್ಕೂ ಹೆಚ್ಚು ಕ್ರಿಡಾಪಟುಗಳು ಸೇರಿದಂತೆ ವಿವಿಧ ಇಲಾಖೆ ಸಿಬ್ಬಂದಿ ಆಟವಾಡಲು ಬರುತ್ತಿದ್ದರು. ಸದ್ಯ ಗೋದಾಮಿನಲ್ಲಿ ರೈತರ ಅನುಕೂಲಕ್ಕಾಗಿ ಈರುಳ್ಳಿ ವ್ಯಾಪಾರ ನಡೆದಿದ್ದರಿಂದ ಆಟಕ್ಕೆ ಸ್ಥಳವಕಾಶ ಇಲ್ಲದಂತಾಗಿದೆ.

***

ಜಿಲ್ಲೆಯ ವಿವಿಧ ತಾಲ್ಲೂಕಿನಲ್ಲಿ ಕ್ರಿಡಾಂಗಣಗಳಿವೆ. ಅಂತೆಯೇ ಬಸವನ ಬಾಗೇವಾಡಿ ಪಟ್ಟಣದಲ್ಲಿ ಸುಸಜ್ಜಿತ ಹೊರಾಂಗಣ ಹಾಗೂ ಒಳಾಂಗಣ ಕ್ರೀಡಾಂಗಣದ ಅಗತ್ಯತೆ ಇದೆ

- ಡಾ.ವಿಶ್ವನಾಥ ನಡಕಟ್ಟಿ, ಅಧ್ಯಕ್ಷ, ವಿಶ್ವಗುರು ಸ್ಪೊರ್ಟ್ಸ್ ಅಸೋಷಿಯೇಶನ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT